ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಸಮಯ ಬಂದಿದ್ದು, ಜೂನ್ 3ಕ್ಕೆ ನೂತನ ಮುಖ್ಯಮಂತ್ರಿ ಪದಗ್ರಹಣವಾಗಲಿದೆ.
ಈ ಬಾರಿ ಮೂರು ವರ್ಷಗಳ ಆಡಳಿತದ ಬಳಿಕ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದು, ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಲಿದ್ದಾರೆ.
ರಾಜಭವನದಲ್ಲಿ ಸರಳವಾಗಿ ಡಿಕೆ ಶಿವಕುಮಾರ್ ಪಟ್ಟಾಭಿಷೇಕ ನಡೆಯಲಿದ್ದು, ಸದ್ಯ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ರಾಜ್ಯ ಕಾಂಗ್ರೆಸ್ ಆಡಳಿತ ಹೇಗಿರಲಿದೆ, ಮಂತ್ರಿ ಮಂಡಲ ಯಾವ ರೀತಿ ಇರಲಿದೆ ಎಂಬ ಕುತೂಹಲ ಮೂಡಿದೆ.
ಹೀಗೆ ಡಿಕೆ ಶಿವಕುಮಾರ್ ನೂತನ ಆಡಳಿತದ ಕುರಿತು ಚರ್ಚೆಗಳು ನಡೆಯುತ್ತಿದ್ದು, ಬಿಜೆಪಿಯಿಂದ ಉಚ್ಚಾಟನೆಗೊಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಳಗಿಳಿಸಿದ್ದು, ಅವರಿಗೆ ಮಾಡಿದ ಅವಮಾನ ಎಂದು ಬೇಸರ ಹೊರಹಾಕಿದ ಯತ್ನಾಳ್ ಅವರಿಗೆ ಬೆನ್ನ ಹಿಂದೆ ಚೂರಿ ಹಾಕಲಾಗಿದೆ ಎಂದರು.
ಮೊದಲಿಗೆ ಎಲ್ಲ ಪಕ್ಷದ್ದೂ ಇದೇ ಕಥೆ, ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಎಲ್ಲ ಮಂತ್ರಿಗಳಾಬೇಕು ಎನ್ನುತ್ತಾರೆ, ಎಲ್ಲರೂ ಅರ್ಹರಿರುತ್ತಾರೆ ಎಂದು ವ್ಯಂಗ್ಯವಾಡಿದ ಯತ್ನಾಳ್ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಎಲ್ಲ ಪಕ್ಷದ್ದೂ ಇದೇ ಹಣೆಬರಹ, ಯಾರು ಚೆನ್ನಾಗಿ ಕೆಲಸ ಮಾಡ್ತಾರೋ ಅವರಿಗೆ ಅಧಿಕಾರ ಸಿಗಬೇಕೇ ಹೊರತು ದುಡ್ಡಿಗೆ ಮಂತ್ರಿ ಪದವಿ ಮಾರಾಟವಾಗಬಾರದು, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರೀತಿ ಅಲ್ಲ ಅವರು ದುಡ್ಡಿಗಾಗಿ ಮಾರಾಟ ಮಾಡಬಹುದು ಎಂದರು.
ಇನ್ನು ಸಿದ್ದರಾಮಯ್ಯನವರನ್ನು ತೆಗೆದಿದ್ದು ಬಹುತೇಕ ಎಲ್ಲರಿಗೂ ನೋವುಂಟುಮಾಡಿದೆ ಎಂದ ಯತ್ನಾಳ್ ಅವರಿಗೆ ಮೋಸ ಮಾಡಿದವರ ಹೆಸರು ಈಗ ಹೊರಬರುತ್ತಿದೆ ಎಂದರು.
ಸಿದ್ದರಾಮಯ್ಯನವರಿಗೆ ಅವರ ಮಗ್ಗಲಿದ್ದೇ ಬೆನ್ನಿಗೆ ಚಾಕು ಹಾಕಿದ್ರು, ಸಂಗೊಳ್ಳಿ ರಾಯಣ್ಣನವರ ರೀತಿಯೇ ಸಿದ್ದರಾಮಯ್ಯನವರಿಗೂ ಅವರ ಜತೆಯಿದ್ದವರೇ ಚೂರಿ ಹಾಕಿದ್ರು ಎಂದ ಯತ್ನಾಳ್ ಆ ವ್ಯಕ್ತಿಯನ್ನು ಮುಂದಿನ ಹಿಂದುಳಿದ ದಲಿತ ನಾಯಕ ಎಂದೇ ನಂಬಲಾಗಿತ್ತು ಎಂದು ಹೇಳಿದರು.
ಹೀಗೆ ಹೆಸರು ಹೇಳದೇ ಹಿಂದುಳಿದ, ಪರಿಶಿಷ್ಟ ನಾಯಕ ಸಿದ್ದರಾಮಯ್ಯನವರ ಬೆನ್ನಿಗೆ ಚೂರಿ ಹಾಕಿದ್ರು ಎಂದ ಯತ್ನಾಳ್ ಮಾತನಾಡಿದ್ದು ಸತೀಶ್ ಜಾರಕಿಹೊಳಿ ಬಗ್ಗೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

