ಮಾನ್ವಿ: ಪಟ್ಟಣದ ಸರ್ಕಾರಿ ಹಣ್ಣಿನ ತೋಟದಲ್ಲಿ ಮೌನ ಮಿತ್ರ ಯೋಗ ಸಮಿತಿ, ಮಾನ್ವಿ ವತಿಯಿಂದ ಮೌನೇಶ ಪೋತ್ನಾಳ್ ದೈಹಿಕ ಶಿಕ್ಷಕ ಅವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮೌನೇಶ ದೈಹಿಕ ಶಿಕ್ಷಕ ಹಾಗೂ ಅವರ ಧರ್ಮಪತ್ನಿಯನ್ನು ಸನ್ಮಾನಿಸಿ, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಮೌನೇಶ ದೈಹಿಕ ಶಿಕ್ಷಕರ ಬಾಲ್ಯ ಜೀವನ, ವಿದ್ಯಾಭ್ಯಾಸ ಹಾಗೂ ಸುದೀರ್ಘ ಶ್ರಮದ ಜೀವನದ ಕುರಿತು ಸಿದ್ದಮಲ್ಲಯ್ಯ ಹಿರೇಮಠ ಅವರು ಕಿರು ಪರಿಚಯ ನೀಡಿದರು.
ಹಿರಿಯರಾದ ಶ್ರೀಶೈಲ ಗೌಡ್ರು ಅವರು ಮೌನೇಶ ಅವರ ಯೋಗ ಕ್ಷೇತ್ರದ ಸಾಧನೆ ಹಾಗೂ ಸೇವೆಯನ್ನು ಕುರಿತು ಮಾತನಾಡಿದರು. ಶಂಕರನಂದ ಅವರು ತಮ್ಮ ಯೋಗಾಭ್ಯಾಸದ ಅನುಭವಗಳನ್ನು ಹಂಚಿಕೊಂಡು,ಯೋಗದಿದ ತಮ್ಮ ಜೀವನದಲ್ಲಿ ಉಂಟಾದ ಪ್ರಯೋಜನಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ಗಣ್ಯರು ಯೋಗದ ಮಹತ್ವ ಹಾಗೂಯೋಗಾಭ್ಯಾಸದಿದ ದೊರೆಯುವ ಆರೋಗ್ಯಕರ ಪ್ರಯೋಜನಗಳ ಕುರಿತು ಮಾತನಾಡಿದರು. ಮಾಜಿ ಸೈನಿಕರಾದ ಅಮರೇಶ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ನೀಡುವ ಪ್ರಯೋಜನಗಳ ಬಗ್ಗೆ ವಿವರಿಸಿದರು.
ಸನ್ಮಾನಿತ ಮೌನೇಶ ದೈಹಿಕ ಶಿಕ್ಷಕ ದಂಪತಿಗಳನ್ನು ಸಾರೋಟಿನಲ್ಲಿ ಮಾನ್ವಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ನಾಗರಾಜು ಜಿ ಅವರು ನೆರವೇರಿಸಿದರು. ಮೌನ ಮಿತ್ರ ಯೋಗ ಸಮಿತಿಯ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ವಿಜಯಕುಮಾರ ಶಿಕ್ಷಕ ನಿರೂಪಿಸಿದರು. ಶಂಕ್ರಯ್ಯ ವಂದಿಸಿದರು.
ವರದಿ :ಆಂಜನೇಯ ನಸಲಾಪುರ


