ಬೆಳಗಾವಿ: ಪರಸ್ಪರ ಒಪ್ಪಿಗೆಯಿಂದ ಮದುವೆಯಾದ (Marriage) ಪತ್ನಿಯನ್ನು ಆಕೆಯ ಮನೆಯವರೇ ಕೂಡಿಹಾಕಿ, ಇದೀಗ ಮತ್ತೊಬ್ಬರ ಜೊತೆ ಮದುವೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಬೆಳಗಾವಿ (Belagavi) ಜಿಲ್ಲೆಯ ಹಿರೆಬಾಗೇವಾಡಿಯಲ್ಲಿ ವೆಂಕಟೇಶ್ವರ ರಾಠೋಡ್ (Venkateshwara Rathod) ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ.
ಇದು 2016 ಲವ್ ಸ್ಟೋರಿ
ಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಟೇಶ್ವರ ರಾಠೋಡ್, "ನನಗೆ ಮಂಜುಳಾ ಹಂಚಿನಮನಿ ಎಂಬಾಕೆಯ ಪರಿಚಯ 2016ರಿಂದಲೇ ಇತ್ತು. ಆಕೆಯನ್ನು ನಾನು 2022ರಲ್ಲಿ ಮದುವೆಯಾಗಿದ್ದೇನೆ.
ಆದರೆ ಈಗ ಆಕೆಯ ತಂದೆ ಹಿರೆಬಾಗೇವಾಡಿಯ ರುದ್ರಪ್ಪ ಹಂಚಿನಮನಿ ಹಾಗೂ ಸಹೋದರ ಪ್ರದೀಪ್ ಹಂಚಿನಮನಿ ಅವರು ಮಂಜುಳಾರನ್ನು ಮನೆಯಲ್ಲೇ ಕೂಡಿಹಾಕಿದ್ದಾರೆ" ಎಂದು ದೂರಿದ್ದಾರೆ. ಅಲ್ಲದೆ, ಪತ್ನಿಯ ಮನೆಯವರಿಗೆ ಮನೆ ಕಟ್ಟಲು ಲಕ್ಷಾಂತರ ರೂಪಾಯಿ ಹಣವನ್ನೂ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಜೈಲಿಗೂ ಕಳುಹಿಸಿದ್ದರು ಎಂದು ಪತಿಯ ಆಕ್ರೋಶ
ಪತ್ನಿಯ ಮನೆಯವರು ನನ್ನ ವಿರುದ್ಧ ಇಲ್ಲಸಲ್ಲದ ದೂರುಗಳನ್ನು ನೀಡಿ, ಸುಳ್ಳು ಕೇಸ್ ದಾಖಲಿಸಿ ನನ್ನನ್ನು ಜೈಲಿಗೂ ಕಳುಹಿಸುವಂತೆ ಷಡ್ಯಂತ್ರ ರೂಪಿಸಿದ್ದರು ಎಂದು ರಾಠೋಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನನ್ನ ಮೇಲೆ ಹಲ್ಲೆ ನಡೆಸಿ ಬಂಗಾರ ಮತ್ತು ಹಣವನ್ನು ಸುಲಿಗೆ ಮಾಡಲಾಗಿದೆ. ನನ್ನ ಪತ್ನಿಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಮತ್ತೊಬ್ಬರಿಗೆ ಮದುವೆ ಮಾಡಲು ಪ್ರಯತ್ನಿಸುತ್ತಿದ್ದಾರೆ, ಇದನ್ನು ಕೂಡಲೇ ನಿಲ್ಲಿಸಬೇಕು" ಎಂದು ಅವರು ಒತ್ತಾಯಿಸಿದ್ದಾರೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ವಿವಾದ
ಈ ಹಲ್ಲೆ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಂಕಟೇಶ್ವರ ರಾಠೋಡ್ ಈಗಾಗಲೇ ಹಿರೆಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮದುವೆಯಾದ ದಾಖಲೆಗಳಿದ್ದರೂ ಪತ್ನಿಯ ಮನೆಯವರು ಅಕ್ರಮವಾಗಿ ಆಕೆಯನ್ನು ಬಂಧಿಸಿಟ್ಟಿರುವುದು ಈಗ ಕಾನೂನು ಸಮರಕ್ಕೆ ಕಾರಣವಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಪತ್ನಿಯನ್ನು ತಮಗೆ ಒಪ್ಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

