ಚಿಕ್ಕಬಳ್ಳಾಪುರ: 'ಪ್ರೀತಿ ಕುರುಡು' ಎಂಬ ಮಾತಿಗೆ ಪೂರಕವೆಂಬಂತೆ, ವರಸೆಯಲ್ಲಿ ಅಕ್ಕ-ತಮ್ಮನಾಗಬೇಕಾದವರೇ ಪ್ರೀತಿಸಿ ಮದುವೆಯಾಗುವ ಮೂಲಕ ಸಮಾಜ ಮತ್ತು ಕುಟುಂಬದ ಕೆಂಗಣ್ಣಿಗೆ ಗುರಿಯಾಗಿರುವ ಘಟನೆ ವರದಿಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿಯ ಶಶಿಕಲಾ (29) ಹಾಗೂ ಹೊಸಕೋಟೆ ತಾಲ್ಲೂಕಿನ ಹಳೆಊರಿನ ಪ್ರವೀಣ್ (24) ಪರಸ್ಪರ ಪ್ರೀತಿಸುತ್ತಿದ್ದರು.
ಇವರಿಬ್ಬರೂ ಸಂಬಂಧದಲ್ಲಿ ಅಕ್ಕ-ತಮ್ಮನಾಗಬೇಕು ಎನ್ನಲಾಗಿದೆ. ಇವರ ಈ ಪ್ರೇಮ ಸಂಬಂಧಕ್ಕೆ ಎರಡು ಕುಟುಂಬಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಮನೆಮಂದಿಯ ವಿರೋಧವನ್ನೂ ಲೆಕ್ಕಿಸದ ಈ ಜೋಡಿ, ಇತ್ತೀಚೆಗೆ ಮದುವೆಯಾಗುವ ಮೂಲಕ ಒಂದಾಗಿದ್ದಾರೆ. ವಯಸ್ಸಿನಲ್ಲಿ ತನಗಿಂತ ಐದು ವರ್ಷ ಚಿಕ್ಕವನಾದ ಪ್ರವೀಣ್ನನ್ನು ಶಶಿಕಲಾ ಮದುವೆಯಾಗಿದ್ದು, ಈ ವಿಚಾರ ತಿಳಿಯುತ್ತಿದ್ದಂತೆಯೇ ಪೋಷಕರು ಆಘಾತಕ್ಕೊಳಗಾಗಿದ್ದಾರೆ.
ಮದುವೆಯ ನಂತರ ಕುಟುಂಬ ಸದಸ್ಯರು ಮತ್ತು ಸಮಾಜದಿಂದ ತಮಗೆ ತೊಂದರೆಯಾಗುವ ಭೀತಿಯಲ್ಲಿರುವ ನವಜೋಡಿ, ರಕ್ಷಣೆ ಕೋರಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕಚೇರಿ ಹಾಗೂ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ತಮಗೆ ಜೀವಭಯವಿದ್ದು, ಪೋಷಕರಿಂದ ರಕ್ಷಣೆ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.

