ಸಿರುಗುಪ್ಪ : ನಗರದ ಡ್ರೈವರ್ ಕಾಲೋನಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಟ್ರಸ್ಟ್ ಹಾಗೂ ವಾಲ್ಮೀಕಿ ಸಮುದಾಯದ ವತಿಯಿಂದ ಜರುಗಿದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಹಾಗೂ ನಾಡದೊರೆ ರಾಜ ವೀರ ಮದಕರಿ ನಾಯಕರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ರೇಣುಕಮ್ಮ ಅವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾಜಿ ಶಾಸಕ ಎಮ್.ಎಸ್.ಸೋಮಲಿಂಗಪ್ಪ ಅವರು ಮಾತನಾಡಿ ನಮ್ಮ ಹಿಂದೂ ಧರ್ಮದಲ್ಲಿ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳಾಗಿದ್ದು, ಮಾನವ ಜೀವನದ ತಪ್ಪುಗಳನ್ನು ತಿದ್ದಿ ಸರಿದಾಗಿ ಕೊಂಡುಯ್ಯುವ ಮಾರ್ಗದರ್ಶನ ಕಾವ್ಯಗಳಾಗಿವೆ.
ಶ್ರೀ ವಾಲ್ಮೀಕಿಯವರ ಜೀವನದ ತತ್ವಾದರ್ಶಗಳನ್ನು ಪಾಲಿಸುತ್ತಾ ನಾವೆಲ್ಲಾ ಸರಿ ದಾರಿಯಲ್ಲಿ ನಡೆಯಬೇಕಾಗಿದೆ. ಎಲ್ಲರೂ ಸುಶಿಕ್ಷಿತರಾಗಿ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ರಾಜ ವೀರಮದಕರಿಯ ಗಮ್ಮತ್ತಿನಲ್ಲಿ ಬದುಕಬೇಕು ಎಂದರು.
ಶ್ರೀ ವಾಲ್ಮೀಕಿ ವಿದ್ಯಾಭಿವೃದ್ದಿ ಟ್ರಸ್ಟಿನ ಅಧ್ಯಕ್ಷ ಬಿ.ಎಮ್.ಸತೀಶ ಅವರು ಮಾತನಾಡಿ 2008ರ ಮುಂಚೆ ನಮ್ಮ ಸಂಘಟನೆಯಲ್ಲಿ ಒಗ್ಗಟ್ಟಿತ್ತು. ಆದರೆ ಈಗ ಇಲ್ಲದಂತಾಗಿದೆ.
ರಾಜಕೀಯ ಪಕ್ಷಗಳ ಮುಖಂಡರಾದ ನಾವೆಲ್ಲಾ ಸಮುದಾಯವನ್ನು ಒಡೆದು ಆಳುತ್ತೇವೆ.
ಆದ್ದರಿಂದ ಸಮಾಜದ ವಿಚಾರ ಬಂದಾಗ ಮಾತ್ರ ಪಕ್ಷಬೇದವನ್ನು ಮರೆತು ನಾವೆಲ್ಲಾ ಒಂದು ಎಂದು ಸಮುದಾಯದ ಸಂಘಟನೆಯಲ್ಲಿ ತೊಡಗಬೇಕೆಂದು ತಿಳಿಸಿದರು.
ಅಖಿಲ ಕರ್ನಾಟಕ ನಾಯಕ ಮಹಾಸಭಾದ ತಾಲೂಕಾಧ್ಯಕ್ಷ ಟಿ.ನರಸಿಂಹನಾಯಕ, ಉಪಾಧ್ಯಕ್ಷ ಹೆಚ್.ವಿ.ಈರಣ್ಣ ಹಾಗೂ ಮಾಜಿ ಅದ್ಯಕ್ಷ ಎಮ್.ಹೊನ್ನಪ್ಪ ಮಾತನಾಡಿ ತಾಲೂಕಿನೆಲ್ಲೆಡೆ ಒಗ್ಗಟ್ಟಿನಿಂದ ಸಮಾಜವನ್ನು ಸಂಘಟಿಸುವ ಕಾರ್ಯವನ್ನು ಮಾಡಬೇಕಿದ್ದು ನಿಮ್ಮೆಲ್ಲರ ಬೆಂಬಲವು ಅಗತ್ಯವಿದೆಂದು ತಿಳಿಸಿದರು.
ಕಾಲೋನಿಯ ಮುಖ್ಯಬೀದಿಗಳಲ್ಲಿ ಶ್ರೀ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಸುಮಂಗಲೆಯರು ಕಳಸವನ್ನು ಹಿಡಿದು ಮೆರುಗು ತಂದರು. ಯುವಕರು ಕೇಸರಿ ಧ್ವಜಗಳನ್ನು ತಿರುಗಿಸಿ ಸಂಭ್ರಮಿಸಿದರು.
ಇದೇ ವೇಳೆ ಡ್ರೈವರ್ ಕಾಲೋನಿ ಶ್ರೀ ವಾಲ್ಮೀಕಿ ಟ್ರಸ್ಟಿನ ಗೌರವಾಧ್ಯಕ್ಷ ಅಂಜಿನಪ್ಪ, ಅಧ್ಯಕ್ಷ ಓಬಳೇಶ, ಉಪಾಧ್ಯಕ್ಷ ಸುರೇಶ, ಪ್ರಧಾನ ಕಾರ್ಯದರ್ಶಿ ಸೋಮಪ್ಪ, ಖಜಾಂಚಿ ರಾಘವೇಂದ್ರ ಯುವ ಮುಖಂಡರಾದ ಕೃಷ್ಣ, ಸಿದ್ದ, ವಿಜಯ್ ಇನ್ನಿತರರಿದ್ದರು.
ವರದಿ : ಶ್ರೀನಿವಾಸ ನಾಯ್ಕ




