ಹುಬ್ಬಳ್ಳಿ: ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಅಮರಗೋಳ ಎಪಿಎಂಸಿ ಆವರಣದಲ್ಲಿ ಏ. ೨೫ ರಿಂದ ೨೯ ರ ವರೆಗೆ ಇನ್ ಕಾಮೆಕ್ಸ್ ೨೦೨೬ ಬೃಹತ್ ಕೈಗಾರಿಕಾ ಹಾಗೂ ವಾಣಿಜ್ಯ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಇನ್ಕಾಮೆಕ್ಸ್ ಅಧ್ಯಕ್ಷ ಮಹಾದೇವ ಕರಮರಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. ೨೫ ರಂದು ಸಂಜೆ ೪ ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕೇಂದ್ರ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕೇಂದ್ರ ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡು, ವಿಸಸಸಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ, ಪ್ರದರ್ಶನ ಮಳಿಗೆಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ಚಾಲನೆ ನೀಡಲಿದ್ದಾರೆ. ಟಾಟಾ ಪ್ರಾಜೆಕ್ಟ್ ವ್ಯವಸ್ಥಾಪಕ ನಿರ್ದೇಶಕ ವಿನಾಯಕ ಪೈ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಸಂಸದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಶಾಸಕರಾದ ಅರವಿಂದ ಬೆಲ್ಲದ, ಎನ್. ಎಚ್. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ವಿವಿ ಸದಸ್ಯರಾದ ಎಸ್.ವಿ. ಸಂಕನೂರ, ಎ-.ಎಚ್. ಚಕ್ಕಪ್ಪನವರ, ಪ್ರದೀಪ ಶೆಟ್ಟರ, ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಮಾಜಿ ಸಚಿವ ಮುರಗೇಶ ನಿರಾಣಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ೧೯೯೬ ರಲ್ಲಿ ಮೊದಲ ಬಾರಿಗೆ ಇನ್ ಕಾಮೆಕ್ಸ್ ಸಮಾರಂಭ ಮಾಡಲಾಗಿತ್ತು. ಇದು ೫ ನೇ ವಸ್ತು ಪ್ರದರ್ಶನವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೋದ್ಯಮಿಗಳ ಪ್ರೋತ್ಸಾಹಿಸುವ ಹಾಗೂ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ವಸ್ತು ಪ್ರದರ್ಶನ ಮಾಡಲಾಗುತ್ತಿದೆ ಎಂದರು.
ಇನ್ ಕಾಮೆಕ್ಸ್ ವಸ್ತು ಪ್ರದರ್ಶನದಲ್ಲಿ ದೇಶ ವಿವಿಧ ಭಾಗದ ೩೦೦ ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುವ ನಿರೀಕ್ಷೆ ಇದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು, ದೊಡ್ಡ ಕೈಗಾರಿಕೆಗಳು, ನವೋದ್ಯಮಗಳು ಸೇರಿದಂತೆ ಸರ್ಕಾರ ವಿವಿಧ ಇಲಾಖೆಗಳು ಭಾಗವಹಿಸುತ್ತಿವೆ. ಪ್ರಮುಖ ಸಂಸ್ಥೆಗಳಾದ ಎಚ್ಎಎಲ್, ಬಿಎಚ್ಇಎಲ್, ಬಿಇಎಂಎಲ್, ಎನ್ಪಿಸಿಎಲ್, ಎನ್ಪಿಸಿಐಎಲ್ ಹಾಗೂ ಗೋವಾ ಶಿಪ್ಯಾರ್ಡ್ ಸಂಸ್ಥೆ ಭಾಗವಹಿಸುತ್ತಿದೆ ಎಂದು ತಿಳಿಸಿದರು. ರೈಲ್ವೆ ಇಲಾಖೆಯ ರೇಲ್ ಕೋಚ್ ಕಾರ್ಖಾನೆ, ಇಂಟಿಗ್ರಲ್ ಕೋಚ್ ಕಾರ್ಖಾನೆ, ಚೈನ್ ರೇಲ್ ವೀಲ್ ಕಾರ್ಖಾನೆ ಮಾರ್ಡನ್ ಕೋಟ್ ಕಾರ್ಖಾನೆ ಭಾಗವಹಿಸುತ್ತಿರುವುದು ಇದೇ ಮೊದಲು. ಐದು ದಿನ ನಡೆಯುವ ಪ್ರದರ್ಶನಕ್ಕೆ ೨ ಲಕ್ಷ ಜನ ಭೇಟಿ ನೀಡುವ ನಿರೀಕ್ಷೆ ಇದೆ. ಶಾಲಾ- ಕಾಲೇಜ್ ಹಾಗೂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಆಹ್ವಾನಿಸಲಾಗಿದೆ ಎಂದು ಹೇಳಿದರು.
೧೫೦-೨೦೦ ಕೋಟಿ ವ್ಯವಹಾರ ನಡೆಯುವ ಸಾಧ್ಯತೆ ಇದೆ. ಹಸಿರು ಶಕ್ತಿ, ಅಗ್ರೋ, ಪ್ರೊಸೆಸಿಂಗ್ ಎಂಜಿನಿಯರಿಂಗ್, ರಕ್ಷಣಾ ಉತ್ಪಾದನೆ, ವಾಹನೋದ್ಯಮ, ಐಟಿ ಹಾಗೂ ಪ್ರವಾಸೋದ್ಯಮ ಹಲವು ಕ್ಷೇತ್ರ ಹೂಡಿಕೆಗಳು ಆಕರ್ಷಿಸಲಿವೆ ಎಂದರು. ಏ. ೨೬ ರಂದು ಬೆಳಿಗ್ಗೆ ೧೧.೩೦ ಕ್ಕೆ ಎಮಜಿಂಗ್ ನಾರ್ಥ್ ಕರ್ನಾಟಕ ಕಾನ್ಕ್ಲೇವ್ಏರ್ಪಡಿಸಿದ್ದು, ಕಾನೂನು ಸಚಿವ ಎಚ್.ಕೆ. ಪಾಟೀಲ, ಕಾರ್ಮಿಕ ಸಚಿವ ಸಂತೊಷ ಲಾಡ್, ಟಾಟಾ ಪ್ರಾಜೆಕ್ಟ್ ವ್ಯವಸ್ಥಾಪಕ ನಿರ್ದೇಶಕ ವಿನಾಯಕ ಪೈ, ಸಂಜಯ ಅಲ್ಮೇಕರ್ ಭಾಗವಹಿಸುತ್ತಿದ್ದಾರೆ. ಏ. ೨೭ ರಂದು ಬೆಳಿಗ್ಗೆ ೧೧.೩೦ ಅಗ್ರಿಕಲ್ಚರಲ್ ಕಾನಕ್ಲೇವ್ ನಡೆಯಲಿದೆ. ಕೃಷಿ ಮಾರುಕಟ್ಟೆಯ ಸಚಿವ ಶಿವಾನಂದ ಪಾಟೀಲ, ಐಎಎಸ್ ಚೇರಮನ್ ಅಶೋಕ ದಳವಾಯಿ, ಮುಖ್ಯ ಭಾಷಣಕಾರರಾಗಿ ಯುಎಎಸ್ ಕುಲಪತಿ ಪಿ.ಎಲ್. ಪಾಟೀಲ, ಹಾರ್ಟಿಕಲ್ಚರ್ ವಿವಿ ಕುಲಪತಿ ಡಾ. ವಿಷ್ಣುವರ್ಧನ, ಕೆ.ಸಿ. ವೀರಣ್ಣ, ಕೆನ್ ಅಗ್ರಿ ಟೇಕ್ ಪ್ರೈ.ಲಿ. ವ್ಯವಸ್ಥಾಪಕ ವಿವೇಕ ನಾಯಕ್ ಭಾಗವಹಿಸಲಿದ್ದಾರೆ ಎಂದರು.
ಏ. ೨೮ ರಂದು ಬೆಳಿಗ್ಗೆ ೧೧.೩೦ ಕ್ಕೆ ಲಾಜಿಸ್ಟಿಕ್ ಸಮ್ಮಿಟ್ ಹಾಗೂ ಗ್ಲೋಬಲ್ ಟ್ರೇಡ್ ಕನೆಕ್ಟ್ ನಡೆಯಲಿದ್ದು, ಸಂಸದ ಜಗದೀಶ ಶೆಟ್ಟರ, ಉದ್ಯಮಿ ವಿನಾಯಕ ರಾವ್, ಅಂಥೋನಿ ಗಾಸ್ಕೆಲ್, ಬಸವರಾಜ ವಾಡಿಗೇರಿ, ಸಂಜೀವ ಚತ್ರಾಜ, ಬಿ.ಕೆ. ಶಿವಕುಮಾರ, ಸತೀಶ ಕೋಟ, ಆದರ್ಶ ಕೆ. ಭಾಗವಹಿಸಲಿದ್ದಾರೆ. ಏ. ೨೯ ರಂದು ಮಹಿಳಾ ಉದ್ಯಮಿ ದಾರರ ಸಮಾವೇಶ ನಡೆಯಲಿದ್ದು, ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ಡಿಜಿಎ-ಟಿ ಸಂಯುಕ್ತ ಮಹಾನಿರ್ದೇಶಕ ಡೋನಾ ಘೋಷ್, ಪ್ರತಿಮಾ ಧೋಂಡ್ ಭಾಗವಹಿಸಲಿದ್ದಾರೆ. ಈ ವೇಳೆ ನಾಲ್ಕು ಕಾರ್ಮಿಕ ಸಂಹಿತೆಗಳ ಕುರಿತು ಸಮೀನಾರ ನಡೆಯಲಿದೆ ಎಂದು ಹೇಳಿದರು. ಕೆಸಿಸಿಐ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ, ಉಪಾಧ್ಯಕ್ಷರಾದ ಪ್ರವೀಣ ಅಂಗಡಿ, ಸಿದ್ದೇಶ್ವರ ಕಮ್ಮಾರ, ವೀರಣ್ಣ ಕಲ್ಲೂರ, ಗೌರವ ಕಾರ್ಯದರ್ಶಿ ಉದಯ ರೇವಣಕರ, ಜೊತೆ ಗೌರವ ಕಾರ್ಯದರ್ಶಿ ಪ್ರಕಾಶ ಶೃಗೇರಿ, ಜಯಪ್ರಕಾಶ ಟೆಂಗಿನಕಾಯಿ, ವಸಂತ ಲಡ್ಡದ, ಶಶಿಧರ ಶೆಟ್ಟರ ಸೇರಿದಂತೆ ಅನೇಕರಿದ್ದರು.
ವರದಿ: ಸುಧೀರ್ ಕುಲಕರ್ಣಿ




