ಶಿವಮೊಗ್ಗ: ಗಂಡ ಸತ್ತ ಒಂದೇ ವಾರಕ್ಕೆ ಆತನ ಪತಿಯ ಹಿಂದೆ ಕಾನ್ಸ್ ಟೇಬಲ್ ಬಿದ್ದಿದ್ದಾನೆ. ಫೇಸ್ ಬುಕ್ ಮೂಲಕ ಅದು ಇದು ಅಂತ ಪುಲ್ ಮೆಸೇಜ್ ಮಾಡಿದ್ದಾನೆ.
ಇಂತಹ ಪೊಲೀಸ್ ಪೇದೆಯ ಕಿರುಕುಳ ತಾಳಲಾರದೇ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಭದ್ರಾವತಿ ನಗರದ ಸಿದ್ದಾಪುರದಲ್ಲಿ ನಡೆದಿದೆ.
ಫೆಬ್ರವರಿ.14ರಂದು ಕೆ ಎಸ್ ಐ ಎಸ್ ಎಫ್ ಶಿವಮೊಗ್ಗ ಘಟಕದಲ್ಲಿ ದಲಾಯತ್ ಆಗಿ ಕಾರ್ಯನಿರ್ವಹಿಸುತ್ತಿದ್ದಂತ ಜಗದೀಶ್, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ಆ ಬಳಿಕ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದಂತ ತೀರ್ಥಹಳ್ಳಿ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಮೋಹನ್ ಎಂಬುವರು ಸ್ವಾತಿಗೆ ಮೆಸೇಜ್ ಮಾಡುತ್ತಿದ್ದರು. ಇದರಿಂದ ಕಿರಿಕಿರಿಗೊಂಡ ಸ್ವಾತಿ, ಆತನ ಫೇಸ್ ಬುಕ್ ಪ್ರೊಫೈಲ್ ಬ್ಲಾಕ್ ಮಾಡಿದ್ದರು.
ಇದಾದ ಬಳಿಕ ಸ್ವಾತಿಗೆ ಮತ್ತೊಂದು ಖಾತೆಯಿಂದ ಪೇದೆ ಮೋಹನ್ ಮೆಸೇಜ್ ಮಾಡುತ್ತಿದರಂತೆ. ಹೀಗಾಗಿಯೇ ಇಂದು ಭದ್ರಾವತಿಯ ಹೊಸ ಸಿದ್ದಾಪುರದ ತಮ್ಮ ಮನೆಯಲ್ಲಿ ಸ್ವಾತಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನೇಣಿಗೂ ಮುನ್ನಾ ಸ್ವಾತಿ ತನ್ನ ತಾಯಿಗೆ ವಾಟ್ಸ್ ಆಪ್ ಮೂಲಕ ಮೆಸೇಜ್ ಮಾಡಿದ್ದು, ಅದರಲ್ಲಿ ತೀರ್ಥಹಳ್ಳಿಯ ಪೊಲೀಸ್ ಪೇದೆ ಮೋಹನ್ ಹೆಸರು ಉಲ್ಲೇಖಿಸಿದ್ದಾರೆ.
ಫೇಸ್ ಬುಕ್ ನಲ್ಲಿ ಮೋಹನ್ ಎಂಬ ಪೊಲೀಸ್ ನನಗೆ ಮೆಸೇಜ್ ಮಾಡಿದ್ದರು. ಅದಕ್ಕೆ ನಾನು ಅವರನ್ನು ಬ್ಲಾಕ್ ಮಾಡಿದ್ದೆ. ಆತ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಸುಮ್ಮನೆ ಬಿಡಬೇಡಿ ಎಂಬುದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ.
ಅಂದಹಾಗೆ ಮೃತ ಜಗದೀಶ್ ಹಾಗೂ ಸ್ವಾತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇದೀಗ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡು ಇಬ್ಬರು ಹೆಣ್ಣುಮಕ್ಕಳು ಅನಾಥರಾಗಿದ್ದಾರೆ.
ಮೃತ ಸ್ವಾತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭದ್ರಾವತಿ ತಾಲ್ಲೂಕು ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಸಂಬಂಧ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ಮುಂದುವರೆಸಿದ್ದಾರೆ.




