ಯಾದಗಿರಿ: ಮಹಾತ್ಮ ಗಾಂಧಿ ನಮ್ಮ ಭಾರತದ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನದ ರಾಷ್ಟ್ರಪಿತ. ಗಾಂಧಿ ನಮ್ಮ ದೇಶದ ರಾಷ್ಟ್ರಪಿತ ಎಂದು ನಾನು ಒಪ್ಪುವುದೇ ಇಲ್ಲ. ನೆಹರು ನಮ್ಮ ದೇಶದ ಮೊದಲ ಪ್ರಧಾನಮಂತ್ರಿ ಎಂದು ನಾನು ಒಪ್ಪುವುದಿಲ್ಲ. ಇವರೆಲ್ಲ ತಮ್ಮ ಚಟಕ್ಕೆ ನಮ್ಮ ದೇಶ ಹಾಳು ಮಾಡಿದವರು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಿತ ಹೇಳಿಕೆ ನೀಡಿದ್ದಾರೆ.
ಶನಿವಾರ ರಾತ್ರಿ ಯಾದಗಿರಿ ಜಿಲ್ಲೆಯ ಗುರುಮಠಕಲ್ ನಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಗಾಂಧಿಯನ್ನು ನಾನು ನಮ್ಮ ಭಾರತದ ರಾಷ್ಟ್ರಪಿತ ಎಂದು ಎಂದಿಗೂ ಒಪ್ಪಿಲ್ಲ. ನೆಹರು ಮೊದಲ ಪ್ರಧಾನಿ ಅಲ್ಲ, ನಮ್ಮ ದೇಶದ ಮೊದಲ ಪ್ರಧಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಅಂಬೇಡ್ಕರ್, ತಿಲಕ್, ಸಾವರ್ಕರ್ ಲಾಲಾ ಲಜಪತರಾಯ್, ಆಜಾದ್ ಅವರಂಥವರು ಸ್ವಾತಂತ್ರ್ಯಕ್ಕಾಗಿ ಕಷ್ಟ ಪಟ್ಟವರು. ಇತಿಹಾಸವನ್ನು ತಿರುಚಿ ನೆಹರು, ಗಾಂಧಿಯನ್ನು ಹೊಗಳಲಾಗಿದೆ ಎಂದು ಹೇಳಿದ್ದಾರೆ.
ಚಕ್ರ ತಿರುಗಿಸಿದ್ದಕ್ಕೆ ಸ್ವಾತಂತ್ರ್ಯ ದೊರೆಯಿತು ಎಂದು ಹೇಳುತ್ತಾರೆ. ಅದೇ ಹೀಗೆ ಸಾಧ್ಯ? ನಾನು ಚಕ್ರ ತಿರುಗಿಸಿದರೆ ಸಿಎಂ ಆಗುತ್ತೇನೆಯೇ ಎಂದು ವ್ಯಂಗ್ಯವಾಡಿದ ಅವರು, ವಂದೇ ಮಾತರಂ ಬಗ್ಗೆ ತಕರಾರು ಮಾಡುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ವಾಗ್ದಾಳಿ ನಡೆಸಿದ್ದಾರೆ.




