ತಿರುವನಂತಪುರಂ: ಕೇರಳದ ಪ್ರಸಿದ್ಧ ಹೋಟೆಲ್ವೊಂದು ವಿಷು ಹಬ್ಬದ (Vishu) ಅಂಗವಾಗಿ ನೀಡಿದ ವಿವಾದಾತ್ಮಕ ಜಾಹೀರಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಕಿಚ್ಚು ಹಚ್ಚಿದೆ.
ಹಿಂದೂಗಳ ಪವಿತ್ರ ಹಬ್ಬದ ಶುಭಾಶಯ ಕೋರುವ ಸಂದರ್ಭದಲ್ಲಿ ಬಾಲಕೃಷ್ಣನ ಚಿತ್ರದ ಪಕ್ಕದಲ್ಲಿ ‘ಚಿಕನ್ ಬಿರಿಯಾನಿ’ಯನ್ನು ಪ್ರದರ್ಶಿಸಿರುವುದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.
ಕೇರಳದ ಮಲಪ್ಪುರಂ ಮೂಲದ ರೆಸ್ಟೋರೆಂಟ್ವೊಂದು ತನ್ನ ಸೋಶಿಯಲ್ ಮೀಡಿಯಾ ಪುಟದಲ್ಲಿ ವಿಷು ಹಬ್ಬದ ವಿಶೇಷ ಆಫರ್ ಪ್ರಕಟಿಸಿತ್ತು. ಈ ಜಾಹೀರಾತಿನಲ್ಲಿ ಕೃಷ್ಣನ ಫೋಟೋದ ಪಕ್ಕದಲ್ಲೇ ಮಾಂಸಾಹಾರಿ ಬಿರಿಯಾನಿಯ ಚಿತ್ರವನ್ನು ಹಾಕಿ, “ವಿಷು ಹಬ್ಬದ ಸಂಭ್ರಮಕ್ಕೆ ಬಿರಿಯಾನಿ ಸವಿಯಿರಿ” ಎಂಬ ಒಕ್ಕಣೆ ಬರೆಯಲಾಗಿತ್ತು.
ಈ ಜಾಹೀರಾತು ಪ್ರಕಟವಾಗುತ್ತಿದ್ದಂತೆಯೇ ನೆಟ್ಟಿಗರು ಹೋಟೆಲ್ ವಿರುದ್ಧ ಮುಗಿಬಿದ್ದಿದ್ದಾರೆ.”ಹಬ್ಬದ ದಿನ ಕೃಷ್ಣನಿಗೆ ಸಸ್ಯಾಹಾರಿ ನೈವೇದ್ಯ ಅರ್ಪಿಸುವುದು ಸಂಪ್ರದಾಯ. ಅಂತಹ ದೈವದ ಪಕ್ಕದಲ್ಲಿ ಮಾಂಸಾಹಾರವನ್ನು ತೋರಿಸುವುದು ಅವಮಾನಕರ” ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ‘Tolerance Has Its Limits’ (ಸಹನೆಗೂ ಒಂದು ಮಿತಿಯಿದೆ) ಎಂಬ ಹ್ಯಾಶ್ಟ್ಯಾಗ್ ವೈರಲ್ ಆಗಿದ್ದು, ಹೋಟೆಲ್ ಅನ್ನು ಬಹಿಷ್ಕರಿಸುವಂತೆ ಅನೇಕರು ಕರೆ ನೀಡಿದ್ದಾರೆ.
ಪ್ರತಿಕ್ರಿಯೆ: ವಿವಾದ ತಾರಕಕ್ಕೇರುತ್ತಿದ್ದಂತೆಯೇ ಎಚ್ಚೆತ್ತ ಹೋಟೆಲ್ ಆಡಳಿತ ಮಂಡಳಿಯು ಜಾಹೀರಾತನ್ನು ಡಿಲೀಟ್ ಮಾಡಿದೆ. ಆದರೆ, ಅಷ್ಟರಲ್ಲೇ ಅದರ ಸ್ಕ್ರೀನ್ಶಾಟ್ಗಳು ದೇಶಾದ್ಯಂತ ಹರಿದಾಡಿವೆ.




