ವಿಜಯಪುರ :ಜಿಲ್ಲೆಯ ನಿಡಗುಂದಿ ತಾಲೂಕಿನ ಅಂಬೇಡ್ಕರ್ ಕಾಲೋನಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.
ಅಂಬೇಡ್ಕರ್ ಕಾಲೋನಿಯಲ್ಲಿ ಬಾಬಾಸಾಹೇಬರ ಮೂರ್ತಿಗೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಲಾಯಿತು. ಈ ವೇಳೆ ನಾಲ್ಕು ತೆಂಗಿನಕಾಯಿಗಳನ್ನು ಒಡೆಯಲಾಗಿದ್ದು, ಅವುಗಳು ಸಮಾನವಾಗಿ ಹೋಳಾಗಿರುವುದು ವಿಶೇಷವಾಗಿ ಗಮನ ಸೆಳೆಯಿತು. ಈ ಘಟನೆ ಅಂಬೇಡ್ಕರ್ ಅವರ ಸಮಾನತೆಯ ತತ್ವವನ್ನು ಪ್ರತಿಬಿಂಬಿಸುವಂತಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ನಿಡಗುಂದಿ ಠಾಣೆಯ ಸಿಪಿಐ ಶರಣಗೌಡ ಗೌಡರ ಅವರು, ಅಂಬೇಡ್ಕರ್ ಜಯಂತಿಯನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ಹೇಳಿದರು. ಸಮಾನತೆ ಮತ್ತು ಏಕತೆ ಎಂಬ ಮಹತ್ವದ ಸಂದೇಶವನ್ನು ದೇಶಕ್ಕೆ ನೀಡಿದ ಮಹಾನ್ ವ್ಯಕ್ತಿತ್ವ ಅಂಬೇಡ್ಕರ್ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಶೇಖರ್ ದೊಡಮನಿ, ಪ್ರಶಾಂತ್ ಚಲವಾದಿ, ಸಿಂಧೂರ ಬೈರವಾಡಗಿ, ಡೊಂಗ್ರಿಸಾಬ್ ಭಜಂತ್ರಿ, ಕಾಮಾಕ್ಷ ಭಜಂತ್ರಿ, ಬಸವರಾಜ್ ಆಲ್ಕೊಪ್ಪರ, ಬಸವರಾಜ್ ಕರಿಯಣ್ಣವರ್, ತಿಪ್ಪಣ್ಣ ಮಾದರ್, ರವಿ ಮೂಪಗಾರ್ ಸೇರಿದಂತೆ ಊರ ಪ್ರಮುಖರು, ಪಿಎಸ್ಐ ಶಿವಾನಂದ ಪಾಟೀಲ್ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ :ಅಲಿ ಮಕಾನದಾರ




