ಬೆಂಗಳೂರು: ಈ ಬಾರಿಯ ಎಸ್ಎಸ್ಎಲ್ಸಿ ತೃತೀಯ ಭಾಷೆಯಲ್ಲಿ ಅಂಕಗಳ ಬದಲು ಗ್ರೇಡಿಂಗ್ ನೀಡುವ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು ನ್ಯಾಯಾಲಯ ಅಂತಿಮ ತೀರ್ಪು ನೀಡದವರು ಫಲಿತಾಂಶ ಪ್ರಕಟ ವಿಳಂಬವಾಗಲಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಏಪ್ರಿಲ್ 24ರಂದು ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ ಮಾಡುವ ಯೋಜನೆ ರೂಪಿಸಿತ್ತು.
ಆದರೆ ತೃತೀಯ ಭಾಷೆ ಹಿಂದಿ ಸೇರಿದಂತೆ ಉಳಿದ ಭಾಷೆಗಳನ್ನು ತೆಗೆದುಕೊಂಡವರ ಅಂಕಗಳನ್ನು ಪರಿಗಣಿಸುವ ಬದಲು ಗ್ರೇಡಿಂಗ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದ ಪರಿಣಾಮ ಗ್ರೇಡಿಂಗ್ ಬದಲು ಅಂಕಗಳನ್ನು ನೀಡಲಿ ಎಂದು ಹೈಕೋರ್ಟ್ ಸೂಚನೆ ನೀಡಿದೆ. ಇದಕ್ಕೆ ಪ್ರತಿಯಾಗಿ ಮರು ಪರಿಶೀಲಿಸುವಂತೆ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.
ಏಪ್ರಿಲ್ 21ರಂದು ವಿಚಾರಣೆ ನಡೆಯಲಿದ್ದು, ಸರ್ಕಾರದ ವಾದ ಆಲಿಸಿದ ಬಳಿಕ ನ್ಯಾಯಾಲಯದ ತೀರ್ಪಿನ ಆಧಾರದಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಫಲಿತಾಂಶ ಪ್ರಕಟಿಸಲಿದೆ.
ಪರೀಕ್ಷೆಗೂ ಮೊದಲೇ ಏಪ್ರಿಲ್ 24ರ ಸಂಭಾವ್ಯ ದಿನಾಂಕದಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
ಏಪ್ರಿಲ್ 21ರಂದು ಮರು ಪರಿಶೀಲನಾ ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯಲಿದ್ದು, ಹೈಕೋರ್ಟ್ ಯಾವ ಆದೇಶ ನೀಡಬಹುದು ಎನ್ನುವ ಬಗ್ಗೆ ಪೋಷಕರು, ವಿದ್ಯಾರ್ಥಿಗಳು ಶಿಕ್ಷಕರ ವಲಯದಲ್ಲಿ ಭಾರಿ ಕುತೂಹಲ ಉಂಟಾಗಿದೆ.
ಈ ಅರ್ಜಿ ಇತ್ಯರ್ಥವಾಗುವವರೆಗೆ ತೃತೀಯ ಭಾಷೆ ವಿಷಯದಲ್ಲಿ ಗ್ರೇಡಿಂಗ್ ನೀಡಬೇಕೆ, ಅಂಕ ಪರಿಗಣಿಸಿ ಒಟ್ಟಾರೆ ಫಲಿತಾಂಶ ಸಿದ್ಧಪಡಿಸಬೇಕೆ ಎನ್ನುವುದು ಸ್ಪಷ್ಟವಾಗಿಲ್ಲ. ಹೀಗಾಗಿ ಎಸ್ಎಸ್ಎಲ್ಸಿ ಮೌಲ್ಯಮಾಪನ ಕಾರ್ಯ ಪೂರ್ಣವಾಗಿದ್ದರೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಫಲಿತಾಂಶ ಪ್ರಕಟಿಸಲು ಹೈಕೋರ್ಟ್ ಆದೇಶದ ನಿರೀಕ್ಷೆಯಲ್ಲಿದೆ.




