ರೈತ ಸಂಘದಿಂದ ತಾ.ಪಂ. ಎದುರು ಪ್ರತಿಭಟನೆ, ಮನವಿ ಸಲ್ಲಿಕೆ
ತುರುವೇಕೆರೆ : ತಾಲೂಕಿನ ಮಾಯಸಂದ್ರ ಗ್ರಾಪಂ ವ್ಯಾಪ್ತಿಯ ಕರ ವಸೂಲಿಗಾರ ಹುದ್ದೆಯನ್ನು ಸ್ಥಳೀಯರಿಗೆ ನೀಡಬೇಕೆಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ರೈತ ಸಂಘದ ತಾಲೂಕು ಅಧ್ಯಕ್ಷ ಕಣಕೂರು ಚಂದ್ರಶೇಖರ್ ಒತ್ತಾಯಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಎದುರು ಸ್ಥಳೀಯರೊಂದಿಗೆ ಪ್ರತಿಭಟನೆ ನಡೆಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, 2017 ರಲ್ಲಿ ಮಾಯಸಂದ್ರ ಗ್ರಾಪಂಯಲ್ಲಿ ಮುತ್ತುರಾಜ್ ಎಂಬ ವ್ಯಕ್ತಿ ಕರವಸೂಲಿಗಾರನಾಗಿ ತಾತ್ಕಾಲಿಕವಾಗಿ ಎರಡು ವರ್ಷಕ್ಕೆ ನೇಮಕ ಮಾಡಿಸಲಾಗಿತ್ತು. ಆದರೆ ಪಂಚಾಯ್ತಿ ಆಡಳಿತ ಮಂಡಳಿಯಲ್ಲಿ ಅನುಮೋದನೆ ಸಿಗದ ಕಾರಣ ತಾತ್ಕಾಲಿಕವಾಗಿ ಮುಂದುವರೆಸಿಕೊಂಡು ಬರಲಾಗಿತ್ತು. ನಂತರದ ದಿನಗಳಲ್ಲಿ ಆ ವ್ಯಕ್ತಿ ಕಾರಣಾಂತರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಆ ವ್ಯಕ್ತಿಯ ಸಹೋದರ ಅನುಕಂಪದ ಆಧಾರದ ಮೇಲೆ ಹುದ್ದೆ ನೀಡಬೇಕೆಂದು ಪಂಚಾಯ್ತಿಯನ್ನು ಅರ್ಜಿ ಸಲ್ಲಿಸಿ ಕೋರಿದ್ದರು. ಪಂಚಾಯ್ತಿಯ ಪಿಡಿಒ ಅವರು ಕಾನೂನು ಸಲಹೆಗಾರರ ಸಲಹೆಯನ್ನು ಪಡೆದಿದ್ದು, ಕಾನೂನು ಸಲಹೆಗಾರರು ಕಾನೂನಿನಲ್ಲಿ ಅನುಕಂಪದ ಆಧಾರದಲ್ಲಿ ಹುದ್ದೆ ನೀಡಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಅದರಂತೆ ಮುತ್ತುರಾಜ್ ಸಹೋದರನ್ನು ಆ ಹುದ್ದೆಗೆ ತೆಗೆದುಕೊಳ್ಳಲಾಗಿಲ್ಲ. ಇದೇ ಹುದ್ದೆಗೆ ಪಂಚಾಯ್ತಿ ವ್ಯಾಪ್ತಿಯ ವಿದ್ಯಾವಂತ ಯುವಕ ಯುವತಿಯರು ಸಹ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಈ ಹುದ್ದೆಗೆ ಗಂಗಾಧರ್ ಎಂಬುವವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ನ್ಯಾಯಾಲಯದ ತೀರ್ಪು ಬರುವವರೆಗೆ ಹುದ್ದೆಗೆ ಯಾರನ್ನೂ ಆಯ್ಕೆ ಮಾಡಬಾರದು ಎಂದರು.
ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣ ಹುದ್ದೆ ನೀಡಲಾಗುವುದಿಲ್ಲ ಎಂದು ಪಂಚಾಯ್ತಿಯು ಮುತ್ತುರಾಜ್ ಸಹೋದರನಿಗೆ ತಿಳಿಸಿದ ನಂತರ, ಆ ವ್ಯಕ್ತಿ ಪಂಚಾಯ್ತಿಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಗಾಂಧಿ ಪುರಸ್ಕಾರ ಪಡೆದ ಮಾಯಸಂದ್ರ ಗ್ರಾಮ ಪಂಚಾಯ್ತಿಗೆ ಕೆಟ್ಟ ಹೆಸರು ಬರುವಂತೆ ಮಾಡುತ್ತಿದ್ದಾರೆ. ಅಲ್ಲದೆ ಅಧಿಕಾರಿಗಳ ತೇಜೋವಧೆ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಕಾನೂನಿನಲ್ಲಿ ಅವಕಾಶವಿದ್ದರೆ ಖಂಡಿತಾ ಆ ಹುದ್ದೆಯನ್ನು ಪಡೆದುಕೊಳ್ಳಲಿ, ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ತಾತ್ಕಾಲಿಕವಾಗಿ ಪಡೆದ ಕೆಲಸಕ್ಕೆ ಅನುಕಂಪದ ಆಧಾರದಲ್ಲಿ ಕೆಲಸ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ, ಇದನ್ನು ತಿಳಿಸಿದ್ದರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಪಂಚಾಯ್ತಿ ಹಾಗೂ ಅಧಿಕಾರಿಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾ ಗ್ರಾಮದ ಹಾಗೂ ಪಂಚಾಯ್ತಿಯ ಮರ್ಯಾದೆ ಕಳೆಯುವ ಕೆಲಸವನ್ನು ಮುಂದುವರೆಸಿದರೆ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿಯ ಅಕ್ಷರ ದಾಸೋಹ ಅಧಿಕಾರಿ ಸವಿತ ಅವರಿಗೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ಗಂಗಾಧರ್, ಕೃಷ್ಣ, ಹೇಮಂತ್ ಗೌಡ, ಆಕಾಶ್, ಅಂಜುಮ್ , ರೋಹಿತ್, ಮಂಜುನಾಥ್, ಮನು, ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




