ತುರುವೇಕೆರೆ: ನಾವು ಕಲಿತ ಅಕ್ಷರ ನಮ್ಮ ಹಸಿವನ್ನು ನೀಗಿಸಿದರೆ ಸಾಲದು, ಅಶಕ್ತರ ಬದುಕನ್ನು ಸಶಕ್ತಗೊಳಿಸಲು ಬಳಕೆಯಾದಾಗ ಮಾತ್ರ ವಿದ್ಯೆಗೆ ಗೌರವ ಹಾಗೂ ವಿದ್ಯಾವಂತರಾದ ನಮ್ಮ ಬದುಕು ಸಾರ್ಥಕ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ತಿಳಿಸಿದರು.
ಪಟ್ಟಣದ ಪ್ರಿಯಾ ಆಂಗ್ಲ ಪ್ರೌಢಶಾಲೆಯ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಕಾಲೇಜಿಗೆ ಹೋಗಬೇಕು, ಚೆನ್ನಾಗಿ ಅಧ್ಯಯನ ಮಾಡಿ ಉತ್ತಮ ಅಂಕ ಗಳಿಸಬೇಕು, ನಂತರ ಒಳ್ಳೆಯ ಉದ್ಯೋಗ ಪಡೆದು ಹೆಚ್ಚು ಹಣ ಸಂಪಾದನೆ ಮಾಡಿ ನೆಮ್ಮದಿಯ ಜೀವನ ಸಾಗಿಸಬೇಕೆನ್ನುವುದು ಎಲ್ಲರ ಆಶಯವಾಗಿರುತ್ತದೆ, ಆದರೆ ಇದು ಕೇವಲ ನಮ್ಮ ಬದುಕನ್ನು ಮಾತ್ರ ನೋಡಿಕೊಳ್ಳುವ ಸ್ವಾರ್ಥವಾಗಿರಲಿದೆಯೇ ಹೊರತು ಸಾರ್ಥಕತೆ ಇರುವುದಿಲ್ಲ. ಅದೇ ನಾವು ಕಲಿತ ವಿದ್ಯೆಯಿಂದ ಮತ್ತೊಬ್ಬರ ಬದುಕನ್ನು ಉತ್ತಮಪಡಿಸಲು ಸಾಧ್ಯವಿದೆ. ಅಂತಹ ಕೆಲಸವನ್ನು ನಾವು ಮಾಡಿದಾಗ ಕಲಿತ ವಿದ್ಯೆ ಸಾರ್ಥಕವಾಗುತ್ತದೆ ಎಂದರು.
ನಾಲ್ಕು ಗೋಡೆಗಳ ಮಧ್ಯೆ ಮಕ್ಕಳ ಭವಿಷ್ಯ ರೂಪಿತವಾಗುತ್ತಿರುವ ಸಂದರ್ಭದಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಶಿಕ್ಷಕರು ಹೆಚ್ಚು ಕಾಳಜಿಯನ್ನು ವಹಿಸಬೇಕು. ವಿಜ್ಞಾನ, ತಂತ್ರಜ್ಞಾನ ಬೆಳೆದಂತೆ ಶಿಕ್ಷಣ ವ್ಯವಸ್ಥೆಯಲ್ಲಿಯೂ ಹೊಸ ಹೊಸ ಬೋಧನಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಡಿಜಿಟಲ್ ವ್ಯವಸ್ಥೆಯ ಮೂಲಕ ಮಕ್ಕಳಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಬೋಧನೆಯಲ್ಲಿ ಹಳೆಯ ಪದ್ದತಿಯ ಜೊತೆಜೊತೆಗೆ ಹೊಸ ಕ್ರಮಗಳನ್ನು ಅಳವಡಿಸಿಕೊಂಡು ಮಕ್ಕಳನ್ನು ಹೆಚ್ಚು ಜ್ಞಾನವಂತರನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದ ಅವರು, ಪೋಷಕರು ತಮ್ಮ ಮಕ್ಕಳ ಆಸಕ್ತಿಯ ಬಗ್ಗೆ ಹೆಚ್ಚು ಗಮನಹರಿಸಬೇಕು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅದನ್ನೂ ಪ್ರೋತ್ಸಾಹಿಸುವ ಮೂಲಕ ಪಠ್ಯ, ಪಠ್ಯೇತರ ಚಟುವಟಿಕೆಯಲ್ಲೂ ಯಶಸ್ಸು ಸಾಧಿಸಲು ನೆರವಾಗಬೇಕು. ಸಮಗ್ರ ಕಲಿಕೆ ಶಿಕ್ಷಣದ ಮೂಲ ಆಶಯವಾಗಿರುವ ಕಾರಣ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಅಕ್ಷರ ಜ್ಞಾನದ ಜೊತೆಗೆ ಕಲೆ, ಸಾಹಿತ್ಯ, ನೃತ್ಯ, ಸಂಗೀತ, ಚಿತ್ರಕಲೆ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆಗಳ ಕಲಿಕೆ, ಕ್ರೀಡಾ ಆಸಕ್ತಿಯೂ ಪ್ರಮುಖವಾಗಲಿದೆ ಎಂದರು.
ಬೆಂಗಳೂರು ಇಂಡಿಯಾ ನಾಲೆಡ್ಜ್ ಡೆವಲಪ್ ಮೆಂಟ್ ಟ್ರಸ್ಟ್ ಛೇರ್ಮನ್ ಡಾ.ತಲಕಾಡು ಚಿಕ್ಕರಂಗೇಗೌಡ ಅವರನ್ನು ಸನ್ಮಾನಿಸಲಾಯಿತು. ಕಳೆದ ವರ್ಷ ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಗಿಚ್ಚಿಗಿಲಿಗಿಲಿ ಕಲಾವಿದ ರಾಘವೇಂದ್ರ ಹಾಸ್ಯಭರಿತ ಸನ್ನಿವೇಶಗಳನ್ನು ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದರು. ಪ್ರಿಯಾ ಆಂಗ್ಲ ಪ್ರೌಢಶಾಲೆ ಅಧ್ಯಕ್ಷ ಎಂ.ಎನ್.ಚಂದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪುಷ್ಪಲತಾ, ಸಹಕಾರ್ಯದರ್ಶಿ ಚೇತನ್, ಕಲಾವಿದ ಸಾಗರ್, ಶಿಕ್ಷಕರು, ಬೋದಕೇತರ ವರ್ಗ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್