ಚೇಳೂರು: ಸಿಪಿಐ(ಎಂ) ತಾಲ್ಲೂಕು ಘಟಕ ಮತ್ತು ಸಿ.ವಿ.ಎಸ್. ಅಭಿಮಾನಿಗಳ ವತಿಯಿಂದ ಬುಧವಾರ ಪಟ್ಟಣದ ಎಂ.ಜಿ. ವೃತ್ತದಲ್ಲಿ ಮಾಜಿ ಶಾಸಕರಾದ ಸ್ವರ್ಗೀಯ ಕಾಮ್ರೇಡ್ ಜಿ.ವಿ. ಶ್ರೀರಾಮರೆಡ್ಡಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀರಾಮರೆಡ್ಡಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಗೊಲ್ಲಪಲ್ಲಿ ಮಂಜುನಾಥ, ಜಿ.ವಿ. ಶ್ರೀರಾಮರೆಡ್ಡಿ ಅವರು ಈ ಭಾಗದ ಶೋಷಿತರ ಮತ್ತು ರೈತರ ಧ್ವನಿಯಾಗಿದ್ದರು. ಅವರ ಹೋರಾಟದ ಹಾದಿ ನಮಗೆಲ್ಲರಿಗೂ ದಾರಿದೀಪ, ತಾಲ್ಲೂಕಿನ ಬಡವರ ಹಿತ ಕಾಯಲು ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವು ಸಾಗಬೇಕಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಿಪಿಐ(ಎಂ) ತಾಲ್ಲೂಕು ಸಮಿತಿ ಕಾರ್ಯದರ್ಶಿ ಬೈರೆಡ್ಡಿ ಮಾತನಾಡಿ, ಚೇಳೂರು ತಾಲ್ಲೂಕಾಗಿ ಘೋಷಣೆಯಾಗಿ ವರ್ಷಗಳು ಕಳೆದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಪದವಿ ಕಾಲೇಜು ಇಲ್ಲದೆ ಬಡ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಶ್ರೀರಾಮರೆಡ್ಡಿ ಅವರ ಕನಸಿನಂತೆ ಈ ಸಮಸ್ಯೆಗಳ ವಿರುದ್ಧ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕ್ರಾಂತಿಗೀತೆಗಳ ಗಾಯನ: ಕಾರ್ಯಕ್ರಮದ ವಿಶೇಷವಾಗಿ ಹಿರಿಯ ಕಲಾವಿದ ಸಿ.ಜೆ. ಶಿವಣ್ಣ ಮತ್ತು ಗೊಲ್ಲಪಲ್ಲಿ ಮಂಜುನಾಥ ಅವರು ಕಾಮ್ರೇಡ್ ಜಿ.ವಿ. ಶ್ರೀರಾಮರೆಡ್ಡಿ ಅವರ ಹೋರಾಟದ ಬದುಕಿನ ಕುರಿತಾದ ಕ್ರಾಂತಿಗೀತೆಗಳನ್ನು ಹಾಡುವ ಮೂಲಕ ಅರ್ಥಪೂರ್ಣವಾಗಿ ನಮನ ಸಲ್ಲಿಸಿದರು.
ಸಭೆಯಲ್ಲಿ ತಾಲ್ಲೂಕು ಸಮಿತಿ ಸದಸ್ಯರಾದ ಬೈರಾರೆಡ್ಡಿ ಎಂ.ಬಿ., ರಾಮಚಂದ್ರ ಬಿ., ಮುಖಂಡರಾದ ಜಹೀರ್ ಬೇಗ್, ಕೃಷ್ಣಪ್ಪ, ಉತ್ತಣ್ಣ, ನಾರಾಯಣಸ್ವಾಮಿ,ಕಾಂಗ್ರೆಸ್ ಕಾರ್ಯಕರ್ತೆ ಪಾತಿಮಾ ಬಿ,ವೆಂಕಟರಮಣಪ್ಪ ವಿ ಸೇರಿದಂತೆ ಹಲವು ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ : ಯಾರಬ್. ಎಂ.




