ಬೆಂಗಳೂರು : ಬಿಜೆಪಿಯಲ್ಲಿನ ಬಣಗಳ ಗುದ್ದಾಟ, ಕಿತ್ತಾಟ ಒಂದು ಹಂತಕ್ಕೆ ಬಂದು ತಲುಪಿದ್ದು, ರಾಜ್ಯಾಧ್ಯಕ್ಷ ವಿರುದ್ಧ ದೂರು ನೀಡಲು ರೆಬಲ್ ಟೀಂ ದೆಹಲಿಗೆ ಹೋಗಿದೆ. ಇದರ ಮಧ್ಯ ಬಿ.ವೈ ವಿಜಯೇಂದ್ರ ಮತ್ತೆ ರಾಜ್ಯಾಧ್ಯಕ್ಷರಾದರೆ ನಮ್ಮ ನಿರ್ಧಾರ ಪ್ರಕಟಿಸುವುದಾಗಿ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಚುನಾವಣೆಗಬೇಕು, ಒಂದು ವೇಳೆ ವಿಜಯೇಂದ್ರನೇ ರಾಜ್ಯಾಧ್ಯಕ್ಷರಾಗಿ ಪುನರಾಯ್ಕೆಯಾದರೆ ನಮ್ಮ ನಿಲುವು ಏನೆಂದು ಅಲ್ಲೇ ವಿವರವಾಗಿ ಹೇಳುತ್ತೇವೆ, ನಾವು ನಿನ್ನೆ ಮೊನ್ನೆಯಿಂದ ರಾಜಕೀಯ ಮಾಡುತ್ತಿಲ್ಲ, ಯಡಿಯೂರಪ್ಪ ಕಾಲದಿಂದಲೂ ಮಾಡುತ್ತಾ ಇದ್ದೇವೆ ಎಂದರು.
ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಚುನಾವಣೆಯಾಗಲೇಬೇಕು. ಈ ಬಗ್ಗೆ ಚರ್ಚೆ ನಡೆಸಲು ಹಾಗೂ ಪಕ್ಷದ ಸಂಘಟನೆ ಕುರಿತು ದೂರು ಆಲಿಸಲು ನನಗೆ ಹಾಗೂ ನನ್ನ ತಂಡಕ್ಕೆ ಪಕ್ಷದ ವರಿಷ್ಠರ ಭೇಟಿ ಸಮಯಾವಕಾಶ ನೀಡಿದ್ದಾರೆ, ನಮ್ಮ ತಂಡ ವರಿಷ್ಠರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದರು.
ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಮ್ಮ ತಂಡದಿಂದ ಅಭ್ಯರ್ಥಿ ಯಾರು ಎಂದು ಸಮಾಲೋಚಿಸಲಾಗುತ್ತಿದೆ. ವರಿಷ್ಠರು ಈ ವರ್ಗದವರು ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಸೂಕ್ತ ಎಂದರೆ ಅವರನ್ನೇ ಆಯ್ಕೆ ಮಾಡಲಾಗುವುದು, ನಮ್ಮಲ್ಲಿ ಯಾವುದೇ ಬೇಧ ಭಾವ ಮಾಡುವುದಿಲ್ಲ ಎಂದು ಯತ್ನಾಳ್ ತಿಳಿಸಿದರು.
ಒಂದು ವೇಳೆ ಪಕ್ಷದ ವರಿಷ್ಠರು ಹಿಂದುಳಿದ ವರ್ಗ ಇಲ್ಲವೇ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದವರನ್ನೇ ಅಭ್ಯರ್ಥಿ ಮಾಡಿ ಎಂದರೆ ತಮ್ಮ ತಂಡದಲ್ಲಿದ್ದಾರೆ ಅವರನ್ನೇ ಆಯ್ಕೆ ಮಾಡಲಾಗುವುದು, ಅದೇ ಪುನಃ ಲಿಂಗಾಯತರೇ ಎನ್ನುವುದಾದರೆ ವಿಜಯೇಂದ್ರ ಎದುರು ನಾನೇ ಅಭ್ಯರ್ಥಿಯಾಗುವುದು ಖಚಿತ ಎಂದು ಯತ್ನಾಳ್ ಹೇಳಿದರು.