ಬೆಳಗಾವಿ : ಬಸ್ನಲ್ಲಿ ಕನ್ನಡದಲ್ಲಿ ಮಾತಾಡಿ ಎಂದು ಮರಾಠಿ ಯುವತಿಗೆ ಹೇಳಿದ್ದಕ್ಕೆ ಮರಾಠಿಗರು ಕನ್ನಡಿಗ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ಇದೀಗ ಭಾಷಾ ಸಂಘರ್ಷದ ರೂಪ ಪಡೆಯುತ್ತಿದೆ.
ಕನ್ನಡಿಗ ಕಂಡಕ್ಟರ್ ಮಹದೇವ್ ಹುಕ್ಕೇರಿ ಮೇಲಿನ ಹಲ್ಲೆ ಖಂಡಿಸಿ ಕನ್ನಡಪರ ಹೋರಾಟಗಾರರು ಮಹಾರಾಷ್ಟ್ರದ ಬಸ್ ಕಂಡಕ್ಟರ್ಗೆ ಮಸಿ ಬಳಿದು ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಇಂದು ಮತ್ತೆ ಕೊಲ್ಲಾಪುರಕ್ಕೆ ತೆರಳುತ್ತಿದ್ದ KSRTC ಬಸ್ ಗೆ ಧ್ವಜ ಕಟ್ಟಿ ಮತ್ತೊಮ್ಮೆ ಕನ್ನಡಿಗರನ್ನು ಕೆಣಕಲಾಗಿದೆ.
ಇದೇ ವಿಚಾರವಾಗಿ MES ಹಾಗೂ ಕರವೇ ನಡುವೆ ಸಂಘರ್ಷ ಏರ್ಪಟ್ಟಿದ್ದು, ಎರಡೂ ಸಂಘಟನೆಗಳು ವಿವಿಧ ರೀತಿಯಲ್ಲಿ ಆಕ್ರೋಶ ಹೊರಹಾಕುತ್ತಿದೆ.
ಕಂಡಕ್ಟರ್ ಮೇಲೆ ದಾಖಲಾಗಿರುವ ಫೋಕ್ಸೋ ಕೇಸ್ ಹಿಂಪಡೆಯುವಂತೆ ಕರವೇ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ್ದು, ಮರಿಹಾಳ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗಿದೆ. ಅಲ್ಲದೆ ಬೆಳಗಾವಿಯಲ್ಲಿ MES ಪ್ರತಿಕೃತಿ ದಹಿಸಿ ಕರವೇ ಆಕ್ರೋಶ ಹೊರಹಾಕಿದ್ದು, ಕೊಪ್ಪಳದ ಅಶೋಕ ವೃತ್ತದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಿಡಿಕಾರಿದ್ದಾರೆ.
ಇನ್ನುಳಿದಂತೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸಂಚರಿಸುವ ಸಾರಿಗೆ ಸಂಚಾರ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಕಂಡಕ್ಟರ್ ಮೇಲಿನ ಹಲ್ಲೆ ಖಂಡಿಸಿ ಮಹಾರಾಷ್ಟ್ರ ಸಾರಿಗೆ ಬಸ್ ಹಾಗೂ ಚಾಲಕನಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದರು.
ಠಾಕ್ರೆ ಗುಂಪು ಕೊಲ್ಲಾಪುರದಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿತ್ತು. ಹೀಗಾಗಿ ಇವತ್ತು ಬೆಳಗ್ಗೆ 10 ಗಂಟೆಯಿಂದ ಕೊಲ್ಲಾಪುರ-ಕರ್ನಾಟಕ ಬಸ್ ಸೇವೆ ಬಂದ್ ಆಗಿವೆ. ಇದ್ರಿಂದಾಗಿ ಪ್ರಯಾಣಿಕರು ಕಂಗಾಲಾಗಿದ್ದಾರೆ.