ಕಲಘಟಗಿ: ಗ್ರಾಮೀಣ ಭಾಗದಲ್ಲಿ ಮಾತ್ರ ದೇಸಿ ಕ್ರೀಡೆಗಳು ಕಾಣ ಸಿಗುತ್ತಿವೆ. ಎಲ್ಲರೂ ಕಬಡ್ಡಿಯಂತಹ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಹೇಳಿದರು.
ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಅಡವಿ ಸಿದ್ಧೇಶ್ವರ ಮಠದ ಆವರಣದಲ್ಲಿ ಶನಿವಾರ ರಾತ್ರಿ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು,
ಸಾಮರಸ್ಯ ಬೆಸೆಯಲು ಕಬಡ್ಡಿ ಕ್ರೀಡೆ ಸಹಕಾರಿಯಾಗಲಿದೆ. ಈ ಆಟದಲ್ಲಿ ತೊಡಗಿಕೊಳ್ಳುವ ಪ್ರತಿಯೊಬ್ಬರಲ್ಲೂ ಕ್ರೀಡಾಸೂರ್ತಿ ವೃದ್ಧಿಗೊಳ್ಳಲಿದೆ ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಶಿಕ್ಷಕ ಪರಶುರಾಮ ಪಾಣಿಗಟ್ಟಿ ಅವರು, ಕಬಡ್ಡಿಗೆ ತನ್ನದೆಯಾದ ಇತಿಹಾಸವಿದೆ. ಸದೃಢ ಆರೋಗ್ಯಕ್ಕೆ ಪೂರಕವಾಗುವ ಕಬಡ್ಡಿಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದರು.
ಗ್ರಾಮದ ಹಿರಿಯರಾದ ಬಸವಣ್ಣೆಪ್ಪ ಟವಳಿ ಮಾತನಾಡಿ, ಎಲ್ಲಕ್ಕಿಂತ ಆರೋಗ್ಯ ಸಂಪತ್ತು ದೊಡ್ಡದು. ಮೊಬೈಲ್ ಗೀಳಿನಲ್ಲಿ ಮುಳುಗುತ್ತಿರುವ ಯುವ ಸಮೂಹ ಆರೋಗ್ಯವನ್ನು ನಿರ್ಲಕ್ಷ್ಯಿಸುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಅನಾರೋಗ್ಯ ಸಮಸ್ಯೆ ಎದುರಾಗುತ್ತಿದೆ. ದೈಹಿಕ ಶ್ರಮ ಬಯಸುವ ಕಬಡ್ಡಿಯಂತಹ ಕ್ರೀಡೆಯಲ್ಲಿ ಯುವಕರು ತೊಡಗಿಕೊಳ್ಳಲಿ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮಂಜುನಾಥ ಧೂಳಿಕೊಪ್ಪ, ಪಿಡಿಒ ಮಂಜುನಾಥ ಅಂಗಡಿ, ಗ್ರಾಪಂ ಸದಸ್ಯ ಈಶ್ವರಪ್ಪ ಹಾವೇರಿ, ವೀರಭದ್ರಪ್ಪ ಮಲಕನಕೊಪ್ಪ, ಚಂಬಣ್ಣ ಖಂಡೂನವರ, ಮಹಾದೇವಪ್ಪ ಹುಬ್ಬಳ್ಳಿ, ಪರಪ್ಪ ಅದರಗುಂಚಿ, ಬಸವರಾಜ ಕಾಮಧೇನ, ಈರಪ್ಪ ಶೀಲವಂತರ, ಟ್ರಸ್ಟ್ ಕಮೀಟಿ ಅಧ್ಯಕ್ಷ ನೀಲಕಂಠಯ್ಯ ಕಂಬಿ, ಆರ್ಚಕ ಬಸಯ್ಯ ಅಂಕಲಿಮಠ, ಯಲ್ಲಪ್ಪ ಕಂಬಾರ, ರವಿ ಬಾಳಿಕಾಯಿ, ಪ್ರಕಾಶ ಕಚ್ಚೂರಿ ಸೇರಿದಂತೆ ಕಬಡ್ಡಿ ಕಮೀಟಿಯ ಎಲ್ಲ ಸದಸ್ಯರು ಇದ್ದರು. ಮಲ್ಲೇಶ ಮುಕ್ಕಣ್ಣವರ ನಿರೂಪಿಸಿದರು.