ಸೇಡಂ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು (ರಿ), ಬೆಂಗಳೂರು ಇದರ ಕಲಬುರಗಿ ವಿಭಾಗದ ಸಂಚಾಲಕರಾಗಿ ಜ್ಯೋತಿ ಲಿಂಗಂಪಲ್ಲಿ ಅವರು ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಇವರು ಆರೋಗ್ಯ ಇಲಾಖೆಯಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸರ್ಕಾರಿ ಕೆಲಸವೆಂದರೆ ಕೇವಲ ಎಂಟು ಗಂಟೆಯ ಕರ್ತವ್ಯವಲ್ಲ, ಅದರಾಚೆಗೂ ಒಂದು ಸಾಂಸ್ಕೃತಿಕ ಜಗತ್ತಿದೆ ಎಂಬುದನ್ನು ಸಾಬೀತುಪಡಿಸಲು ಸಜ್ಜಾಗಿದೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು. ಈ ನೂತನ ಪರಿಷತ್ತಿನ ಕಲಬುರಗಿ ವಿಭಾಗದ ಸಂಚಾಲ ಜ್ಯೋತಿ ಅಂಗಂಪಲ್ಲಿ ಸಂಚಾಲಕರಾಗಿ ನೇಮಕಗೊಂಡಿದ್ದಾರೆ. ಮೂಲತಃ ಸೇಡಂ ತಾಲ್ಲೂಕಿನವರಾದ ಜ್ಯೋತಿ ಲಿಂಗಂಪಲ್ಲಿ ಅವರು ಒಬ್ಬ ಸಂವೇದನಾಶೀಲ ಸಾಹಿತಿಯೂ ಹೌದು. ವೃತ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯಾಗಿರುವ ಇವರು, ಕಳೆದ 18 ವರ್ಷಗಳ ಕಾಲ ಕೋಡ್ಲಾ ಗ್ರಾಮದ ಆಸ್ಪತ್ರೆಯಲ್ಲಿ ಸಲ್ಲಿಸಿದ ಸುದೀರ್ಘ ಸೇವೆ ಸ್ಮರಣೀಯವಾದುದು. ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡುವ ಜೊತೆಜೊತೆಗೇ ತಮ್ಮ ಸಾಹಿತ್ಯಿಕ ಕೃಷಿಯನ್ನು ಮುಂದುವರಿಸಿಕೊಂಡು ಬಂದಿರುವ ಇವರು, ನೌಕರರ ಸಂಕಷ್ಟ ಮತ್ತು ಸಂಭ್ರಮಗಳನ್ನು ಹತ್ತಿರದಿಂದ ಕಂಡವರು.
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಈ ಪರಿಷತ್ತು ಇದೇ ವರ್ಷ ತನ್ನ ಪಯಣ ಆರಂಭಿಸುತ್ತಿದ್ದು, ಇದರ ಮೊದಲ ರಾಜ್ಯಮಟ್ಟದ ಭವ್ಯ ಪದಗ್ರಹಣ ಸಮಾರಂಭವು ಇದೇ ಏಪ್ರಿಲ್ 26ರಂದು ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಜರುಗಲಿದೆ. ಈ ವೇದಿಕೆಯಲ್ಲಿ ಜ್ಯೋತಿ ಅವರು ಕಲಬುರಗಿ ವಿಭಾಗದ ಸಂಚಾಲಕರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಸರ್ಕಾರಿ ನೌಕರರಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತರುವುದು ಈ ಪರಿಷತ್ತಿನ ಮೂಲ ಆಶಯ. ಈ ನಿಟ್ಟಿನಲ್ಲಿ ಜ್ಯೋತಿ ಅವರು ಕೆಲವು ಮಹತ್ವದ ಗುರಿಗಳನ್ನು ಹಾಕಿಕೊಂಡಿದ್ದಾರೆ. ಸುಪ್ತ ಪ್ರತಿಭೆಗಳ ಶೋಧ. ಕಚೇರಿಯ ಒತ್ತಡದ ನಡುವೆ ಮರೆಯಾಗಿರುವ ಗಾಯಕರು, ಕವಿಗಳು, ಚಿತ್ರಕಲಾವಿದರು ಮತ್ತು ರಂಗಕರ್ಮಿಗಳನ್ನು ಗುರುತಿಸುವುದು.
ಒಬ್ಬ ಸಾಹಿತಿಯಾಗಿ ಮತ್ತು ಸರ್ಕಾರಿ ನೌಕರಳಾಗಿ ನೌಕರರ ಭಾವನೆಗಳು ನನಗೆ ಗೊತ್ತು. ದೈನಂದಿನ ಒತ್ತಡದ ನಡುವೆ ಕಲೆ ಮತ್ತು ಸಾಹಿತ್ಯ ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಕಲಬುರಗಿ ವಿಭಾಗದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ, ನಮ್ಮ ನೌಕರರ ಪ್ರತಿಭೆಯನ್ನು ಇಡೀ ಸಮಾಜಕ್ಕೆ ಪರಿಚಯಿಸುವ ಈ ಜವಾಬ್ದಾರಿಯನ್ನು ನಾನು ಅತ್ಯಂತ ಪ್ರೀತಿಯಿಂದ ನಿಭಾಯಿಸುತ್ತೇನೆ. — ಜ್ಯೋತಿ ಅಂಗಂಪಲ್ಲಿ, ನೂತನ ಸಂಚಾಲಕರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




