ತುರುವೇಕೆರೆ: ಯಾವುದೇ ಯೋಜನಾ ಪ್ರಾಧಿಕಾರದಿಂದ ಅನುಮೋದನೆಗೊಂಡಿಲ್ಲದೆ ಕಂದಾಯ ಭೂಮಿಯಲ್ಲಿ ನಿವೇಶನ, ಕಟ್ಟಡಗಳನ್ನು ಹೊಂದಿರುವವರು ಬಿ-ಖಾತಾ ಮಾಡಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ. ಬಿ-ಖಾತಾ ಪಡೆಯಲು ಕಟ್ಟಕಡೆಯ ಅವಕಾಶವಾಗಿದ್ದು, ನಿಯಮಬಾಹಿರವಾಗಿ ಕಟ್ಟಡ ಹೊಂದಿರುವವರು ಕೂಡಲೇ ಪಟ್ಟಣ ಪಂಚಾಯ್ತಿಯಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ ಬಿ-ಖಾತಾ ಪಡೆಯಬೇಕೆಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸ್ವಪ್ನನಟೇಶ್ ತಿಳಿಸಿದರು.
ಪಟ್ಟಣ ಪಂಚಾಯ್ತಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಂದಾಯ ಭೂಮಿಯಲ್ಲೇ ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿಕೊಂಡಿರುವ ಬಡ, ಮಧ್ಯಮವರ್ಗದವರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಬಿ-ಖಾತಾ ಮಾಡಿಸಿಕೊಳ್ಳುವ ಅವಕಾಶವನ್ನು ನೀಡಿದೆ. ಈ ಅವಕಾಶ 2025 ರ ಮೇ 10 ರವೆರೆಗ ಮಾತ್ರ ಲಭ್ಯವಿದ್ದು, ನಂತರ ಯಾವುದೇ ಅನಧಿಕೃತ ಸ್ವತ್ತುಗಳಿಗೆ ಇ-ಖಾತೆ ಮಾಡಲು ಅವಕಾಶವಿರುವುದಿಲ್ಲ ಎಂದ ಅವರು, ಪಟ್ಟಣದ ನಾಗರೀಕರಿಗೆ ಬಿ-ಖಾತಾ ಪಡೆಯಲು ಅನುಕೂಲವಾಗಲೆಂದೇ ಪಟ್ಟಣ ಪಂಚಾಯ್ತಿಯಲ್ಲಿ ಬಿ-ಖಾತಾಗೆಂದೇ ವಿಶೇಷ ಕೌಂಟರ್ ತೆರೆಯಲಾಗಿದೆ. ತಲಾ ಓರ್ವ ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ಅರ್ಜಿ ಬರೆದುಕೊಡಲ ಓರ್ವರನ್ನು ನೇಮಿಸಲಾಗಿದೆ. ನಾಗರೀಕರು ಅರ್ಜಿ ನೀಡಿದ 7 ದಿನಗಳಲ್ಲಿ ಬಿ-ಖಾತಾ ಮಾಡಿಕೊಡಲಾಗುವುದು. ಈ ಬಿ-ಖಾತಾ ಮುಂದೆ ಆಸ್ತಿ ಪರಭಾರೆಗೆ, ಕ್ರಯ ಮಾಡಲು, ದಾನ ನೀಡಲು ಅಗತ್ಯ ದಾಖಲೆಯಾಗಲಿದೆ. ಸರ್ಕಾರ ನೀಡಿರುವ ಈ ಅವಕಾಶವನ್ನು ಬಳಸಿಕೊಂಡು ಆಸ್ತಿಯನ್ನು ಬಿ-ಖಾತಾ ಮಾಡಿಸಿಕೊಳ್ಳಬೇಕೆಂದು ಕೋರಿದರು.
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು ಮಾತನಾಡಿ, ಪಟ್ಟಣ ಪಂಚಾಯ್ತಿಯಲ್ಲಿ ಎ-ಖಾತೆ ಮಾತ್ರ ನೀಡಲಾಗುತ್ತಿತ್ತು. ಈಗ ಸರ್ಕಾರದ ಆದೇಶದಂತೆ ಬಿ-ಖಾತೆಯನ್ನು ಸಹ ನೀಡಲಾಗುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು 8900 ಕ್ಕೂ ಅಧಿಕ ಖಾತೆಗಳಿದ್ದವು ಗ್ರಾಮ ಠಾಣಾ, ಭೂಪರಿವರ್ತನೆಯಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದಿಂದ ಅನುಮತಿ ಪಡೆದ ಸ್ವತ್ತುಗಳು, ಆಶ್ರಯ ಯೋಜನೆಯಲ್ಲಿ ಪಡೆದ ನಿವೇಶನ ಹಾಗೂ ಪಟ್ಟಣ ಪಂಚಾಯ್ತಿಯಲ್ಲಿ ಹರಾಜಿನಲ್ಲಿ ಪಡೆದ ಆಸ್ತಿಗಳು ಮಾತ್ರ ಎ ಖಾತಾ ವ್ಯಾಪ್ತಿಗೆ ಒಳಪಟ್ಟಿವೆ. ಭೂ ಪರಿವರ್ತನೆಯಾಗಿ ಯಾವುದೇ ಯೋಜನಾ ಪ್ರಾಧಿಕಾರದಿಂದ ಅನುಮೋದನೆಗೊಂಡಿಲ್ಲದ ನಿವೇಶನ, ಕಟ್ಟಡಗಳು ಪಟ್ಟಣದಲ್ಲಿ ಸಾಕಷ್ಟಿದ್ದರೂ ಅವುಗಳಿಗೆ ಇ-ಖಾತಾ ನೀಡುತ್ತಿರಲಿಲ್ಲ. ಈಗ ಸರ್ಕಾರ ಆದೇಶ ಮಾಡಿದ್ದು, ಆದೇಶದನ್ವಯ ಬಿ-ಖಾತಾ ನೀಡಲಿದ್ದೇವೆ. ಸಾರ್ವಜನಿಕರು ಕೂಡಲೇ ಸರ್ಕಾರ ನೀಡಿರುವ ಅವಕಾಶ ಸದುಪಯೋಗಪಡಿಸಿಕೊಂಡು ಕಡ್ಡಾಯವಾಗಿ ಸ್ವತ್ತನ್ನು ಖಾತೆ ಮಾಡಿಸಿಕೊಳ್ಳಬೇಕು ಎಂದರು.
ಮುಂದಿನ ಮೂರು ತಿಂಗಳೊಳಗೆ ಪಟ್ಟಣದಲ್ಲಿರುವ ಎಲ್ಲಾ ಆಸ್ತಿಗಳು, ಸ್ವತ್ತುಗಳು ಡಿಜಿಟಲೀಕರಣವಾಗಬೇಕಿದೆ. ಡಿಜಿಟಲ್ ಇ-ಖಾತಾ ಪ್ರತಿಯಿಲ್ಲದೆ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ನೋಂದಣಿಯಾಗಲೀ, ಆಸ್ತಿ ವಿಭಾಗವಾಗಲೀ, ಕ್ರಯವಾಗಲೀ, ದಾನವಾಗಲೀ ಯಾವುದೇ ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ನಿಗದಿಪಡಿಸಿರುವ ಅಂತಿಮ ದಿನಾಂಕವಾದ 2025 ರ ಮೇ 10 ರೊಳಗೆ ಎಲ್ಲಾ ಆಸ್ತಿಗಳು ಎ-ಖಾತಾ ಅಥವಾ ಬಿ-ಖಾತಾ ಆಗಿ ಡಿಜಿಟಲೀಕರಣವಾಗಬೇಕಿದೆ. ಡಿಜಿಟಲ್ ಪ್ರತಿ ಹೊರತುಪಡಿಸಿ ಕೈಬರಹದ ಪ್ರತಿಗಾಗಲೀ, ಅಟೆಸ್ಟ್ ಮಾಡಿಕೊಟ್ಟ ಪ್ರತಿಗಾಗಲೀ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂಬುದನ್ನು ನಾಗರೀಕರು ಮನಗಾಣಬೇಕಿದೆ. ಹೆಚ್ಚಿನ ವಿವರಗಳಿಗೆ ಸ್ಥಳೀಯ ಪಟ್ಟಣ ಪಂಚಾಯ್ತಿಯನ್ನು ಸಂಪರ್ಕಿಸಬೇಕೆಂದು ಕೋರಿದರು.
ಗೋಷ್ಟಿಯಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರಾದ ಅಂಜನ್ ಕುಮಾರ್, ಆರ್.ಮಧು, ಪ್ರಭಾಕರ್, ಆಶಾರಾಜಶೇಖರ್, ಶೀಲಾಶಿವಪ್ಪನಾಯಕ, ಜಯಮ್ಮ, ಕಂದಾಯ ನಿರೀಕ್ಷಕ ಪ್ರಶಾಂತ್, ಕರ ವಸೂಲಿಗಾರ ನರಸಿಂಹಮೂರ್ತಿ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್