ತುರುವೇಕೆರೆ : ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ಚಂದ್ರಶೇಖರ್ ಅವರು ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂದು ಕಾಲೇಜಿನ ಎದುರು ಪ್ರತಿಭಟನೆ ನಡೆಸಿತು. ಅಲ್ಲದೆ ಉಪನ್ಯಾಸಕರನ್ನು ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿತು.

ಈ ಕುರಿತಂತೆ ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಗಣೇಶ್ ಮಾತನಾಡಿ, ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕರ ನಡವಳಿಕೆ ಹಾಗೂ ಅವರಿಂದಾಗುತ್ತಿರುವ ಮಾನಸಿಕ ತೊಂದರೆಯ ಬಗ್ಗೆ ವಿದ್ಯಾರ್ಥಿನಿಯರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗೆ ಮೌಖಿಕ ಹಾಗೂ ಲಿಖಿತವಾಗಿ ತಿಳಿಸಿದ್ದಾರೆ. ಈ ಬಗ್ಗೆ ಎಬಿವಿಪಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಜಿಲ್ಲಾ ಉಪನಿರ್ದೇಶಕರ ಗಮನಕ್ಕೂ ತಂದಿದ್ದೇವೆ. ಗುರು ಸ್ಥಾನ ಬಹಳ ದೊಡ್ಡದು. ಅಂತಹ ಸ್ಥಾನದಲ್ಲಿದ್ದುಕೊಂಡು ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ ಮಾಡುವ ಇಂತಹ ಉಪನ್ಯಾಸಕರ ಅವಶ್ಯಕತೆ ಕಾಲೇಜಿಗೆ ಇರುವುದಿಲ್ಲ. ಕೂಡಲೇ ಉಪನ್ಯಾಸಕ ಚಂದ್ರಶೇಖರ್ ಅವರನ್ನು ಅಮಾನತ್ತುಗೊಳಿಸಬೇಕು ಹಾಗೂ ನಾಳೆಯಿಂದ ಈ ಕಾಲೇಜಿಗೆ ಅವರು ಕರ್ತವ್ಯಕ್ಕೆ ಬರದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಜ್ವಲ್ ಮಾತನಾಡಿ, ಆಂಗ್ಲ ಉಪನ್ಯಾಸಕರು ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುವುದು, ಎರಡು ಅರ್ಥ ಬರುವ ರೀತಿಯಲ್ಲಿ ಮಾತನಾಡುವುದು, ಪಾಠದ ಸಮಯದಲ್ಲಿ ಸ್ಪರ್ಶಿಸಿ ಮಾತನಾಡುವುದು, ಪಾಠದ ಹೊರತಾದ ವಿಷಯ ಮಾತನಾಡುವುದು, ಕಾಲೇಜಿನ ಸಮಯದ ನಂತರವೂ ವಿದ್ಯಾರ್ಥಿನಿಯರ ಮೊಬೈಲ್ ಗೆ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ರವಾನಿಸುವುದು ಸೇರಿದಂತೆ ಹಲವು ರೀತಿಯಲ್ಲಿ ಮಾನಸಿಕವಾಗಿ ತೊಂದರೆ ಕೊಡುತ್ತಿದ್ದಾರೆಂದು ಆರೋಪಿಸಿದ ಅವರು, ಈ ಹಿನ್ನೆಲೆಯಲ್ಲಿ ಎಬಿವಿಪಿ ವಿದ್ಯಾರ್ಥಿನಿಯರ ಪರವಾಗಿ ನಿಂತು ಉಪನ್ಯಾಸಕರ ಅಮಾನತ್ತಿಗೆ ಒತ್ತಾಯಿಸುತ್ತಿದೆ ಎಂದರು.
ಬೆಳಿಗ್ಗೆ11.30 ಕ್ಕೆ ಪ್ರಾರಂಭವಾದ ಪ್ರತಿಭಟನೆ ಮಧ್ಯಾಹ್ನ 3 ಗಂಟೆಯಾದರೂ ನಿಲ್ಲಲಿಲ್ಲ. ಕೊನೆಗೆ ಜೋರಾಗಿ ಮಳೆ ಸುರಿಯಿತು. ಮಳೆಯಲ್ಲೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರು ಕಾಲೇಜಿನ ಎದುರು ಪ್ರತಿಭಟಿಸುತ್ತಲೇ ಇದ್ದರು. ಈ ಮಧ್ಯೆ ಎರಡು ಮೂರು ಬಾರಿ ಪೊಲೀಸರು, ಪ್ರಾಂಶುಪಾಲರು ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಮಳೆ ನಿಂತ ನಂತರ ಕಾಲೇಜಿನ ವಿದ್ಯಾರ್ಥಿನಿಯರೂ ಪ್ರತಿಭಟನಾ ನಿರತರ ಬಳಿ ತೆರಳಿ ನಾಳೆಯಿಂದ ಆಂಗ್ಲ ಉಪನ್ಯಾಸಕರು ಕಾಲೇಜಿಗೆ ಬರುವುದು ಬೇಡ ಎಂದು ಘೋಷಣೆ ಕೂಗಿ ತಮ್ಮ ನೋವನ್ನು ಹೊರಹಾಕಿದರು.
ಕಾಲೇಜಿನ ಪ್ರಾಂಶುಪಾಲ ಪಾಪರಾಜು ಪ್ರತಿಭಟನಾ ನಿರತರೊಂದಿಗೆ ಮಾತನಾಡಿ, ಎಬಿವಿಪಿ ನೀಡಿರುವ ಮನವಿಯನ್ನು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರಿಗೆ ದೂರವಾಣಿ ಮೂಲಕ ತಿಳಿಸಿದ್ದೇನೆ. ಉಪನಿರ್ದೇಶಕರು ಉಪನ್ಯಾಸಕರನ್ನು ತುಮಕೂರಿನ ಇಲಾಖಾ ಕಛೇರಿಗೆ ಕರೆ ತರುವಂತೆ ಸೂಚಿಸಿದ್ದಾರೆ. ಉಪನ್ಯಾಸಕರು ತಪ್ಪು ಮಾಡಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
ಪ್ರಾಂಶುಪಾಲರು ಹಾಗೂ ಪೊಲೀಸ್ ಇಲಾಖೆಯ ಮನವಿ ಮೇರೆಗೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ಅಂತ್ಯಗೊಳಿಸಿದರು. ಉಪನ್ಯಾಸಕರ ಅಮಾನತ್ತು ಆಗದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟ, ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು. ಪ್ರಭಟನೆಯಲ್ಲಿ ಮನೋಜ್, ಭರತ್, ಗೌರಮ್, ದರ್ಶನ್, ಮಧು, ಚಂದ್ರಶೇಖರ್, ಧನಂಜಯ, ರೋಹನ್ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್


