ಬೆಂಗಳೂರು: ಅಪರಾಧ ಪ್ರಕರಣವೊಂದರಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿರುವ ವ್ಯಕ್ತಿಯ ಆಸ್ತಿ ಹಕ್ಕುಗಳು ಯಾವುದೇ ಕಾರಣಕ್ಕೂ ಮೊಟಕುಗೊಳ್ಳುವುದಿಲ್ಲ. ಆತ ಜೈಲಿನಲ್ಲಿದ್ದರೂ ಸಹ ತನ್ನ ಸ್ವಂತ ಆಸ್ತಿಯನ್ನು ಮಾರಾಟ ಮಾಡಲು ಮತ್ತು ನೋಂದಣಿ (ರಿಜಿಸ್ಟ್ರೇಷನ್) ಮಾಡಿಕೊಡಲು ಕಾನೂನುಬದ್ಧವಾಗಿ ಸಂಪೂರ್ಣ ಅವಕಾಶವಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ: ಧಾರವಾಡದ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಕಮಲಾಪುರ ಗ್ರಾಮದ ನಿವಾಸಿ ಬಸವರಾಜು ಎಂಬುವವರು ತಮ್ಮ ಮಾಲೀಕತ್ವದ 22 ಗುಂಟೆ ಜಮೀನನ್ನು ಮಾರಾಟ ಮಾಡಲು ಮುಂದಾಗಿದ್ದರು.
ಆದರೆ, ಜೈಲಿನಲ್ಲಿದ್ದ ಕಾರಣ ಅವರಿಗೆ ಖುದ್ದಾಗಿ ಉಪನೋಂದಣಾಧಿಕಾರಿಗಳ (ಸಬ್ ರಿಜಿಸ್ಟ್ರಾರ್) ಕಚೇರಿಗೆ ತೆರಳಿ ಜಮೀನಿನ ಕ್ರಯಪತ್ರಕ್ಕೆ ಸಹಿ ಹಾಕಲು ಸಾಧ್ಯವಾಗಿರಲಿಲ್ಲ.
ಜೈಲಧಿಕಾರಿಗಳ ಅಸಹಕಾರ: ಈ ಹಿನ್ನೆಲೆಯಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಗಾಗಿ ಉಪನೋಂದಣಾಧಿಕಾರಿಗಳೇ ಖುದ್ದಾಗಿ ಜೈಲಿಗೆ ಬರಲು ಒಪ್ಪಿಗೆ ಸೂಚಿಸಿದ್ದರು.
ಆದರೆ, ಇದಕ್ಕೆ ಸಂಬಂಧಪಟ್ಟ ಜೈಲಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿರಲಿಲ್ಲ ಹಾಗೂ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಲು ನಿರಾಕರಿಸಿದ್ದರು. ಜೈಲಧಿಕಾರಿಗಳ ಈ ಧೋರಣೆಯಿಂದ ಬೇಸತ್ತ ಕೈದಿ ಬಸವರಾಜು, ನ್ಯಾಯ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.


