ಎಡ್ಮಂಟನ್ : ಉನ್ನತ ಶಿಕ್ಷಣ ಹಾಗೂ ಉತ್ತಮ ಭವಿಷ್ಯದ ಕನಸು ಹೊತ್ತು ಕೆನಡಾಕ್ಕೆ ತೆರಳಿದ್ದ ಪಂಜಾಬ್ ನ 23 ವರ್ಷದ ಯುವತಿಯೋರ್ವಳು ಅನುಮಾನಾಸ್ಪದ ರೀತಿಯಲ್ಲಿ ಕೊಲೆಯಾಗಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಆಕೆಯೊಂದಿಗೆ ಸಹಜೀವನ (ಲಿವ್-ಇನ್) ನಡೆಸುತ್ತಿದ್ದ ಭಾರತೀಯ ಮೂಲದ ಯುವಕನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಪಂಜಾಬ್ನ ಲೂಧಿಯಾನ ಜಿಲ್ಲೆಯ ಸಮ್ರಾಲಾ ಮೂಲದ ದಮನ್ಪ್ರೀತ್ ಕೌರ್ ಕೊಲೆಯಾದ ದುರ್ದೈವಿ. ಸುಮಾರು ಐದು ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಲ್ಲಿ ಕೆನಡಾಕ್ಕೆ ತೆರಳಿದ್ದ ಈಕೆಗೆ ಪೋಷಕರು ಸಾಲ ಮಾಡಿ ಶಿಕ್ಷಣಕ್ಕೆ ನೆರವಾಗಿದ್ದರು.
ಆಗ್ನೇಯ ಎಡ್ಮಂಟನ್ನ ಸಿಲ್ವರ್ಬೆರ್ರಿ ಪ್ರದೇಶದ ನಿವಾಸವೊಂದರಲ್ಲಿ ಜುಲೈ 9 ರಂದು ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ದಮನ್ಪ್ರೀತ್ ಪತ್ತೆಯಾಗಿದ್ದರು.
ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಜುಲೈ 12 ರಂದು ಆಕೆ ಮೃತಪಟ್ಟಿದ್ದಾಳೆ.
ಜುಲೈ 14 ರಂದು ನಡೆದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಸತ್ಯಾಂಶ ಹೊರಬಿದ್ದಿದೆ.
ಘಟನೆಗೆ ಸಂಬಂಧಿಸಿದಂತೆ 22 ವರ್ಷದ ರಿತೀಶ್ ಕುಮಾರ್ ಎಂಬ ಯುವಕನನ್ನು ಪೊಲೀಸರು ಜುಲೈ 22 ರಂದು ಬಂಧಿಸಿದ್ದು, ಆತನ ವಿರುದ್ಧ ದ್ವಿತೀಯ ಹಂತದ ಕೊಲೆ ಪ್ರಕರಣ (Second-degree murder) ದಾಖಲಿಸಿದ್ದಾರೆ.
ಇದು ನಿಕಟ ಸಂಬಂಧಿಕರ ನಡುವೆ ನಡೆದ ಕೊಲೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬೇರೆ ಯಾವುದೇ ಶಂಕಿತರ ಹುಡುಕಾಟ ನಡೆಸುತ್ತಿಲ್ಲ ಎಂದು ಎಡ್ಮಂಟನ್ ಪೊಲೀಸ್ ಸೇವೆಯ (EPS) ತನಿಖಾಧಿಕಾರಿಗಳು ತಿಳಿಸಿದ್ದಾರೆ.


