ಬೀದರ್: ಇಡೀ ರಾಜ್ಯದಲ್ಲೇ ತಲ್ಲಣ ಸೃಷ್ಟಿಸಿದ್ದ ಬೀದರ್ನ ಎಟಿಎಂ (Bidar ATM Case) ದರೋಡೆ ಪ್ರಕರಣದ ಆರೋಪಿಗಳನ್ನು ಮಟ್ಟಹಾಕುವಲ್ಲಿ ಜಿಲ್ಲಾ ಪೊಲೀಸ್ (Crime) ತಂಡ ಕೊನೆಗೂ (Robbery) ಯಶಸ್ವಿಯಾಗಿದೆ.
ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ದರೋಡೆಕೋರರನ್ನು ಬಿಹಾರದಲ್ಲಿ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಒಂದು ವರ್ಷ ಏಳು ತಿಂಗಳ ಬಳಿಕ ಸೆರೆ
ಬಂಧಿತರನ್ನು ಅಮನ್ಕುಮಾರ್ ಸಿಂಗ್ ಮತ್ತು ಅಲೋಕ್ಕುಮಾರ್ ಎಂದು ಗುರುತಿಸಲಾಗಿದ್ದು, ಇವರನ್ನು ಬಿಹಾರದ ವೈಶಾಲಿ ಜಿಲ್ಲೆಯ ಧಾಮೋದರ್ ಗ್ರಾಮದಲ್ಲಿ ಸೆರೆಹಿಡಿಯಲಾಗಿದೆ.
ಕೃತ್ಯ ನಡೆದ ಬರೋಬ್ಬರಿ ಒಂದು ವರ್ಷ ಏಳು ತಿಂಗಳ ಸುದೀರ್ಘ ಹುಡುಕಾಟದ ಬಳಿಕ ಈ ಅಂತರ್ ರಾಜ್ಯ ದರೋಡೆಕೋರರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸುಮಾರು ಇಪ್ಪತ್ತು ದಿನಗಳ ಹಿಂದೆಯೇ ಆರೋಪಿಗಳ ಚಲನವಲನದ ಬಗ್ಗೆ ನಿಖರ ಸುಳಿವು ಪಡೆದಿದ್ದ ಬೀದರ್ ಪೊಲೀಸರು, ಅಲ್ಲಿಯೇ ಬೀಡು ಬಿಟ್ಟು ಅವರ ಮೇಲೆ ನಿರಂತರ ನಿಗಾ ಇರಿಸಿದ್ದರು.
ಬೀದರ್ ಎಸ್ಪಿ ಪ್ರದೀಪ್ ಗುಂಟಿ ಅವರ ನೇತೃತ್ವದಲ್ಲಿ ರೂಪಿಸಲಾಗಿದ್ದ ವಿಶೇಷ ಕಾರ್ಯಾಚರಣೆಯ ಅನ್ವಯ, ಇಂದು ಮಧ್ಯಾಹ್ನ ಬಿಹಾರದಲ್ಲಿ ಆರೋಪಿಗಳ ಕಾರನ್ನು ಬೆನ್ನಟ್ಟಿ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ಸದ್ಯ ಬಂಧಿತರನ್ನು ಬೀದರ್ಗೆ ಕರೆತರಲಾಗುತ್ತಿದೆ.
ಈ ಕಾರ್ಯಾಚರಣೆಯ ವಿಶೇಷತೆಯೆಂದರೆ, ಸ್ಥಳೀಯ ಅಥವಾ ಬೇರೆ ಯಾವುದೇ ರಾಜ್ಯದ ಪೊಲೀಸರ ಸಹಾಯ ಪಡೆಯದೇ ಕೇವಲ ಬೀದರ್ ಪೊಲೀಸ್ ತಂಡವೇ ಈ ಜಾಲವನ್ನು ಭೇದಿಸಿದೆ.
ಈ ಭರ್ಜರಿ ಕಾರ್ಯಾಚರಣೆಯಲ್ಲಿ ಒಬ್ಬರು ಎಸ್ಪಿ, ಇಬ್ಬರು ಡಿಎಸ್ಪಿ, ಇಬ್ಬರು ಸಿಪಿಐ, ನಾಲ್ವರು ಪಿಎಸ್ಐ ಹಾಗೂ ಕ್ರೈಂ ವಿಭಾಗದ 12 ಸಿಬ್ಬಂದಿ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.


