ನವದೆಹಲಿ: ಸರಕಾರಿ ನೌಕರರು ಸೇವೆಯಲ್ಲಿರುವಾಗಲೇ ಮೃತಪಟ್ಟರೆ, ಅವರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಪ್ರಕ್ರಿಯೆಯಲ್ಲಿ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳ ನಡುವೆ ಯಾವುದೇ ರೀತಿಯ ತಾರತಮ್ಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅನುಕಂಪದ ಆಧಾರದ ನೇಮಕಾತಿ ನಿಯಮಗಳು ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯಿಸಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಅನುಕಂಪದ ಉದ್ಯೋಗದ ನಿಯಮಗಳಲ್ಲಿ ಕೇವಲ ಗಂಡುಮಕ್ಕಳು ಮತ್ತು ಅವಿವಾಹಿತ ಪುತ್ರಿಯರನ್ನು ಮಾತ್ರ ಸೇರಿಸಿ, ವಿವಾಹಿತ ಅಥವಾ ವಿಚ್ಛೇದಿತ ಪುತ್ರಿಯರನ್ನು ಹೊರಗಿಡುವುದು ಸಂವಿಧಾನ ವಿರೋಧಿ ಎಂದು ಪೀಠ ಹೇಳಿದೆ.
ಈ ರೀತಿಯ ತಾರತಮ್ಯವು ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಮತ್ತು ವಿಧಿ 15 (ಲಿಂಗ, ಜಾತಿ, ಧರ್ಮ ಆಧಾರಿತ ತಾರತಮ್ಯದ ನಿಷೇಧ) ಗಳ ನೇರ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮದುವೆಯಾದ ತಕ್ಷಣ ಮಗಳು ತಂದೆ-ತಾಯಿಯ ಕುಟುಂಬದ ಭಾಗವಾಗಿ ಉಳಿಯುವುದಿಲ್ಲ ಎಂದು ಭಾವಿಸುವುದು ತಪ್ಪು. ಅನುಕಂಪದ ನೇಮಕಾತಿ ಯೋಜನೆಯಲ್ಲಿ ಲಿಂಗ ತಾರತಮ್ಯಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.


