ತೆಲಂಗಾಣ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಭೀಕರ ದುರ್ಘಟನೆ ಸಂಭವಿಸಿದ್ದು, ಕೆರೆಯಲ್ಲಿ ಮುಳುಗಿ ಆರು ಮಂದಿ ಯುವಕರು ಮೃತಪಟ್ಟಿದ್ದಾರೆ. ಬುಧವಾರ ಸಂಜೆ ತೆಲಂಗಾಣದ ಪಟಾಂಚೆರು ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡ ಕಂಜರ್ಲಾ ಗ್ರಾಮದ ನೇರೇಡುಚೆರ್ಲಾ ಕೆರೆಯಲ್ಲಿ ಈ ದುರಂತ ಸಂಭವಿಸಿದೆ.
ಮೃತರು ಪಟಾಂಚೆರು ಮಂಡಲದ ಇನೋಲ್ ಗ್ರಾಮದ ಶಿರಿಷಾ ಚಾರಿಟಬಲ್ ಟ್ರಸ್ಟ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಗಣೇಶ ಮೂರ್ತಿ ವಿಸರ್ಜನೆಗಾಗಿ ಚಾರಿಟಬಲ್ ಟ್ರಸ್ಟ್ನ ವಿದ್ಯಾರ್ಥಿಗಳು ನೇರೇಡುಚೆರ್ಲಾ ಕೆರೆಗೆ ತೆರಳಿದ್ದರು. ಕೆರೆಯ ನೀರಿನ ಅಡಿಯಲ್ಲಿ ಆಳವಾದ ಗುಂಡಿಯಿರುವುದು ವಿದ್ಯಾರ್ಥಿಗಳಿಗೆ ತಿಳಿದಿರಲಿಲ್ಲ. ಹೀಗಾಗಿ ಅವರು ನೀರಿನಲ್ಲಿ ಮುಂದೆ ಸಾಗಿದಾಗ ಆಳಕ್ಕೆ ಸಿಲುಕಿ ಮುಳುಗಿದ್ದಾರೆ.
ಒಟ್ಟು ಒಂಬತ್ತು ಮಂದಿ ವಿದ್ಯಾರ್ಥಿಗಳು ನೀರಿಗೆ ಇಳಿದಿದ್ದು, ಈ ಪೈಕಿ ಈಜು ಬಲ್ಲ ಮೂವರು ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತರನ್ನು ನರಸಿಂಹ ರಾಜು (18), ಸುಮಂತ್ (19), ಗಣೇಶ್ (20), ಉದಯ್ ಕುಮಾರ್ (21), ಶಾಮ್ ಕುಮಾರ್ (18) ಮತ್ತು ಸಿದ್ಧಾರ್ಥ್ (16) ಎಂದು ಗುರುತಿಸಲಾಗಿದೆ.
ಮೊದಲ ಐವರು ಪಾಲಿಟೆಕ್ನಿಕ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು. ಸಿದ್ಧಾರ್ಥ್ 10ನೇ ತರಗತಿಯಲ್ಲಿ ಓದುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.


