ಚೇಳೂರು: ಗ್ರಾಮೀಣ ಭಾಗದ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತರಲು ಹಾಗೂ ರಜಾ ಅವಧಿಯನ್ನು ಜ್ಞಾನಾರ್ಜನೆಯೊಂದಿಗೆ ಕಳೆಯಲು ಪೂರಕವಾಗಿ, ಇಲ್ಲಿನ ಗ್ರಾಮ ಪಂಚಾಯತಿ ಅರಿವು ಕೇಂದ್ರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ 15 ದಿನಗಳ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಂತೆ ಬೇಸಿಗೆ ರಜೆಯಲ್ಲಿ ಗುಣಮಟ್ಟದ ಕಲಿಕೆಯಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಮುಂದಿನ 15 ದಿನಗಳ ಕಾಲ ನಡೆಯಲಿರುವ ಈ ಶಿಬಿರವು ಮಕ್ಕಳಲ್ಲಿ ಓದುವ, ಬರೆಯುವ ಹವ್ಯಾಸದ ಜೊತೆಗೆ ಗಣಿತದ ಅಂಕಿ-ಅಂಶಗಳು, ವಿಜ್ಞಾನದ ಕುತೂಹಲಗಳು, ನಾಯಕತ್ವದ ಗುಣ ಹಾಗೂ ಪರಿಣಾಮಕಾರಿ ಸಂವಹನ ಕೌಶಲ್ಯವನ್ನು ಬೆಳೆಸುವ ಮುಖ್ಯ ಉದ್ದೇಶವನ್ನು ಹೊಂದಿದೆ.
ಕೇವಲ ಪಠ್ಯಕ್ಕೆ ಸೀಮಿತವಾಗದೆ, ಮಕ್ಕಳಲ್ಲಿ ಸೃಜನಾತ್ಮಕತೆಯನ್ನು ಉದ್ದೀಪಿಸಲು ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಮಕ್ಕಳಿಗೆ ಮಕ್ಕಳ ಪುಸ್ತಕಗಳು, ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳ ಓದುವಿಕೆ.ಪತ್ರ ಲೇಖನ, ಕವನ ರಚನೆ ಹಾಗೂ ಲೇಖನಗಳನ್ನು ಸಿದ್ಧಪಡಿಸುವುದು.ಚರ್ಚಾ ಸ್ಪರ್ಧೆಗಳು ಹಾಗೂ ಭಾಷಣ ಕಲೆ ಅಭಿವೃದ್ಧಿಪಡಿಸುವ ಚಟುವಟಿಕೆಗಳ ತರಬೇತಿಗಳನ್ನು ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗೌಸ್ ಪೀರ್,ಮಕ್ಕಳು ಮೊಬೈಲ್ ಸಂಸ್ಕೃತಿಯಿಂದ ಹೊರಬಂದು ಇಂತಹ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಅವರ ಬೌದ್ಧಿಕ ವಿಕಸನ ಸಾಧ್ಯ. ಈ ಶಿಬಿರದ ಸಂಪೂರ್ಣ ಮೇಲುಸ್ತುವಾರಿಯನ್ನು ಪಂಚಾಯತಿ ವತಿಯಿಂದಲೇ ನಿರ್ವಹಿಸಲಾಗುತ್ತಿದ್ದು, ಪ್ರತಿಯೊಬ್ಬ ಮಗುವಿಗೂ ವೈಯಕ್ತಿಕ ಗಮನ ನೀಡಲಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವೈದ್ಯಾಧಿಕಾರಿ ಭಾಸ್ಕರ್ ಮಾತನಾಡಿ,ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಶಿಸ್ತು ಕೂಡ ಮುಖ್ಯ. ಇಂತಹ ಸಮೂಹ ಚಟುವಟಿಕೆಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದರು.
ಶಿಬಿರದ ಪೂರ್ಣ ಜವಾಬ್ದಾರಿಯನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೇ ವಹಿಸಿಕೊಂಡಿದ್ದು,ಚೇಳೂರಿನ ಪೋಷಕರು ಮತ್ತು ಮಕ್ಕಳಲ್ಲಿ ಹೊಸ ಸಂಚಲನ ಮೂಡಿಸಿದ್ದು, ರಜೆಯ ಸಂಭ್ರಮಕ್ಕೆ ಜ್ಞಾನದ ಮೆರುಗು ನೀಡಿದೆ.
ಕಾರ್ಯಕ್ರಮದಲ್ಲಿ ಶಿಕ್ಷಕರು ವಿ ಎಸ್ ಸತ್ಯನಾರಾಯಣ,ನಾಗರಾಜ್, ಗ್ರಂಥಪಾಲಕಿ ರಾಬೀಯಾ, ಅಂಗನವಾಡಿ ಸಹಾಯಕಿ ಮೋನಿಕಾ ಇದ್ದರು.
ವರದಿ :ಯಾರಬ್. ಎಂ.

