ಬೆಂಗಳೂರು: ರಾಜ್ಯ ಸರ್ಕಾರದ ಅಧಿಕೃತ ಜಾಹೀರಾತುಗಳಲ್ಲಿ ದಲಿತ ನಾಯಕರ ಭಾವಚಿತ್ರಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗುತ್ತಿದೆ ಎಂದು ಆರೋಪಿಸಿರುವ ಜೆಡಿಎಸ್, ಕಾಂಗ್ರೆಸ್ ಪಕ್ಷವು ದಲಿತರನ್ನು ಕೇವಲ 'ವೋಟ್ ಬ್ಯಾಂಕ್' ಆಗಿ ಬಳಸಿಕೊಳ್ಳುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಹೊರಡಿಸಿದ್ದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾರ್ಯಕ್ರಮದ ಪತ್ರಿಕಾ ಜಾಹೀರಾತಿನಲ್ಲಿ, ಹಾಲಿ ಉಪಮುಖ್ಯಮಂತ್ರಿ ಹಾಗೂ ದಲಿತ ಸಮುದಾಯದ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರ ಭಾವಚಿತ್ರವನ್ನು ಕೈಬಿಟ್ಟಿರುವುದನ್ನು ಜೆಡಿಎಸ್ ಬಲವಾಗಿ ಖಂಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸರಣಿ ಪೋಸ್ಟ್ಗಳನ್ನು ಹಂಚಿಕೊಂಡಿರುವ ಜೆಡಿಎಸ್, ಜಾಹೀರಾತಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಭಾವಚಿತ್ರವನ್ನು ಮಾತ್ರ ಪ್ರಮುಖವಾಗಿ ಪ್ರದರ್ಶಿಸುವ ಮೂಲಕ 'ಏಕಸ್ವಾಮ್ಯ' ಮೆರೆದಿದ್ದಾರೆ ಎಂದು ಟೀಕಿಸಿದೆ.
ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಬಿಗಿಯುವ ಕಾಂಗ್ರೆಸ್ನ ಅಸಲಿ ನ್ಯಾಯ ಪತ್ರಿಕೆಗಳಲ್ಲಿ ಸಾಬೀತಾಗಿದೆ. ತಾವಿದ್ದಾಗ ಫೋಟೋ ಕಡ್ಡಾಯ ಮಾಡಿಕೊಳ್ಳುವ ಮುಖ್ಯಮಂತ್ರಿಗಳು, ದಲಿತ ನಾಯಕರೊಬ್ಬರು ಡಿಸಿಎಂ ಆದಾಗ ಅವರ ಫೋಟೋಗೆ ಜಾಗ ನೀಡುವುದಿಲ್ಲವೇ?" ಎಂದು ಜೆಡಿಎಸ್ ನೇರವಾಗಿ ಪ್ರಶ್ನಿಸಿದೆ.
ಹಿಂದುಳಿದ ಹಾಗೂ ದಲಿತ ವರ್ಗಗಳ ಪರವಾಗಿ ಬದುಕಿದ ದೇವರಾಜ ಅರಸು ಅವರ ಕಾರ್ಯಕ್ರಮದ ಜಾಹೀರಾತಿನಲ್ಲೇ ದಲಿತ ನಾಯಕರಿಗೆ ಈ ಮಟ್ಟದ ನಿರ್ಲಕ್ಷ್ಯ ತೋರಿರುವುದು ಕಾಂಗ್ರೆಸ್ನ ಅಹಂಕಾರಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಜೆಡಿಎಸ್ ಕಿಡಿಕಾರಿದೆ.
2025ರಲ್ಲಿ ತಮಗೊಂದು ನ್ಯಾಯ, 2026ರಲ್ಲಿ ದಲಿತರಿಗೊಂದು ನ್ಯಾಯವೇ? ಎಂದು ಪ್ರಶ್ನಿಸಿರುವ ಪಕ್ಷವು, ದಲಿತ ನಾಯಕರ ವಿರುದ್ಧದ ಇಂತಹ ಮಲತಾಯಿ ಧೋರಣೆಯನ್ನು ರಾಜ್ಯದ ಜನತೆ ಗಮನಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದೆ.

