ಕಾಸರಗೋಡು: ಉಕ್ರೇನ್ ಮತ್ತು ರಷ್ಯಾ ನಡುವಿನ ಭೀಕರ ಯುದ್ಧವು ಮತ್ತೊಬ್ಬ ಭಾರತೀಯನ ಬಲಿಯನ್ನು ಪಡೆದಿದೆ. ಉಕ್ರೇನ್ನ ಒಡೆಸಾ ನಗರದ ಸಮೀಪವಿರುವ ಎಂವಿ ಗೋಲ್ಡನ್ ಲಿಯೋ (MV Golden Leo) ಎಂಬ ಸರಕು ಸಾಗಣೆ ಹಡಗಿನ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಕೇರಳದ ಯುವ ನಾವಿಕ ಅಖಿಲ್ ಜೋಯನ್ ಸೇರಿದಂತೆ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ.
ಕಣ್ಣೀರಲ್ಲಿ ಮುಳುಗಿದ ಸಂಬಂಧಿಗಳು
ಮೃತ ಅಖಿಲ್ ಜೋಯನ್ (26) ಕೇರಳದ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ನಿವಾಸಿ. ಕೇವಲ ಮೂರು ತಿಂಗಳ ಹಿಂದೆಯಷ್ಟೇ ಅಖಿಲ್ ಅವರ ನಿಶ್ಚಿತಾರ್ಥ ಅಲೆಪ್ಪಿಯ ಯುವತಿಯೊಂದಿಗೆ ಅದ್ಧೂರಿಯಾಗಿ ನಡೆದಿತ್ತು. ಇನ್ನು ಎರಡು ತಿಂಗಳಲ್ಲಿ ಮದುವೆ ನಿಶ್ಚಯವಾಗಿತ್ತು.
ಮದುವೆಗಾಗಿ ಸಿದ್ಧತೆಗಳು ನಡೆಯುತ್ತಿದ್ದವು, ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಒಂದು ತಿಂಗಳ ಹಿಂದೆಯಷ್ಟೇ ಅವರು ರಜೆ ಮುಗಿಸಿ ಮತ್ತೆ ಕೆಲಸಕ್ಕೆ ತೆರಳಿದ್ದರು.
ಅಖಿಲ್ ಅವರ ತಂದೆ ಜೋಯನ್ ಎಲೆಕ್ಟ್ರಿಕಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಸ್ಯಾಲಿ ಇನ್ಶೂರೆನ್ಸ್ ಏಜೆಂಟ್ ಆಗಿದ್ದಾರೆ.
ಈ ಸಾಮಾನ್ಯ ಕುಟುಂಬಕ್ಕೆ ಅಖಿಲ್ ಏಕೈಕ ಮಗನಾಗಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಅವರು 19ನೇ ವಯಸ್ಸಿನಲ್ಲೇ ಮರ್ಚೆಂಟ್ ನೇವಿಗೆ ಸೇರಿದ್ದರು.
ಇತ್ತೀಚೆಗಷ್ಟೇ ಒಂದು ಹೊಸ ಮನೆಯನ್ನು ಕೂಡ ಕಟ್ಟಿಸಿದ್ದರು. ಶೀಘ್ರದಲ್ಲೇ ಈ ಕೆಲಸ ಬಿಟ್ಟು ಬೇರೆ ಉತ್ತಮ ಕೆಲಸಕ್ಕೆ ಸೇರುವ ಕನಸು ಅವರದ್ದಾಗಿತ್ತು.


