ಮೈಸೂರು: ಇಂದು ಆಷಾಡ ಮಾಸದ ಮೊದಲ ಶುಕ್ರವಾರ. ಈ ಹಿನ್ನೆಲೆಯಲ್ಲಿ ನಾಡ ಅದಿದೇವತೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬರುತ್ತಿದ್ದು, ಚಾಮುಂಡಿ ತಾಯಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಹರಕೆ ತೀರಿಸಿದ್ದಾರೆ.
ಪತಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾದರೆ ನಾಡದೇವತೆ ಚಾಮುಂಡೇಶ್ವರಿಗೆ ಉಡಿಸಲು ಸೀರೆ ನೀಡುವುದಾಗಿ ಉಷಾ ಶಿವಕುಮಾರ್ ಅವರು ಈ ಹಿಂದೆ ಹರಕೆ ಹೊತ್ತಿದ್ದರು.
ಅದರಂತೆ, ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಅತ್ಯಂತ ಪವಿತ್ರ ದಿನ. ಈ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಾವು ಕಾಣಿಕೆಯಾಗಿ ತಂದಿದ್ದ ರೇಷ್ಮೆ ಸೀರೆಯನ್ನು ತಾಯಿಯ ಮೂಲ ವಿಗ್ರಹಕ್ಕೆ ಸಮರ್ಪಿಸಿ ಹರಕೆ ಪೂರೈಸಿದರು.
ಸಿಎಂ ಪತ್ನಿ ಭಕ್ತಿಯಿಂದ ಅರ್ಪಿಸಿದ ಸೀರೆಯನ್ನು ಚಾಮುಂಡಿಬೆಟ್ಟದ ಆಡಳಿತ ಮಂಡಳಿ ಹಾಗೂ ಪ್ರಧಾನ ಅರ್ಚಕರು ದೇವಿಗೆ ಉಡಿಸಿ, ವಿಶೇಷ ಅಲಂಕಾರದೊಂದಿಗೆ ಮಹಾಮಂಗಳಾರತಿ ನೆರವೇರಿಸಿದ್ದಾರೆ. ಮೊದಲ ಆಷಾಢ ಶುಕ್ರವಾರದ ಸಡಗರದಲ್ಲಿ ಸಿಎಂ ಕುಟುಂಬದ ಈ ವಿಶೇಷ ಸೇವೆ ಭಕ್ತರ ಗಮನ ಸೆಳೆದಿದೆ.
ಮೈಸೂರು ಚಾಮುಂಡೇಶ್ವರಿ ದೇವಿಗೆ ಉಡಿಸಲು ನೀಡುವ ಸೀರೆ ಹರಕೆಯನ್ನು ಭಕ್ತರು ವಿಶೇಷವಾಗಿ ಮದುವೆ, ನಾಮಕರಣ, ಉದ್ಯೋಗ ಅಥವಾ ಇತರೆ ಇಷ್ಟಾರ್ಥಗಳು ನೆರವೇರಿದಾಗ ಮಾಡಿಕೊಳ್ಳುತ್ತಾರೆ. ಈ ಹರಕೆಯನ್ನು ತಲುಪಿಸಲು ದೇವಾಲಯದಲ್ಲಿ ಅಧಿಕೃತ ಸೀರೆ ಹರಕೆ ಸೇವೆ ಲಭ್ಯವಿದೆ.
ಹರಕೆಯಾಗಿ ಅರ್ಪಿಸಲು ಭಕ್ತರು ತಾವೇ ಸ್ವತಃ ಹೊಸ ರೇಷ್ಮೆ ಸೀರೆಯನ್ನು ತಂದು ದೇವಸ್ಥಾನದ ಕಚೇರಿಗೆ ನೀಡಬೇಕು. ದೇವಸ್ಥಾನದ ಇ-ಸೇವಾ ನಿಯಮಾವಳಿಗಳ ಪ್ರಕಾರ, ತಾಯಿಗೆ ಒಂದು ಸೀರೆ ಉಡಿಸಲು ಪ್ರಾಧಿಕಾರವು ನಿಗದಿಪಡಿಸಿರುವ ಸೇವಾ ಶುಲ್ಕ ಅತ್ಯಂತ ಕೈಗೆಟುಕುವಂತಿದ್ದು (ಸುಮಾರು 50 ರಿಂದ 1000 ರ ಆಸುಪಾಸಿನಲ್ಲಿ), ತಿಂಗಳ ಆರಂಭಕ್ಕೆ 5 ದಿನ ಮುಂಚಿತವಾಗಿಯೇ ಇದರ ಆನ್ಲೈನ್ ಬುಕಿಂಗ್ ವಿಂಡೋ ತೆರೆಯುತ್ತದೆ.


