ತುರುವೇಕೆರೆ : ತಾಲ್ಲೂಕಿನ ಕೊಡಗೀಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ 2025-26ನೇ ಸಾಲಿನಲ್ಲಿ 17 ಲಕ್ಷದ 40 ಸಾವಿರ ರೂ ಲಾಭವನ್ನು ಗಳಿಸಿದೆ ಎಂದು ತುಮುಲ್ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ತಿಳಿಸಿದರು.
ತಾಲ್ಲೂಕಿನ ಕೊಡಗೀಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, 2003 ರಲ್ಲಿ ಸ್ಥಾಪನೆಯಾದ ಸಂಘ ವರ್ಷದಿಂದ ವರ್ಷಕ್ಕೆ ಅಭಿವೃದ್ದಿ ಹೊಂದುತ್ತಾ ಬಂದಿದೆ. ಪ್ರಾರಂಭದಲ್ಲಿ ಲಾಭಾಂಶ ಶೇ.3 ರಷ್ಟಿತ್ತು, ಪ್ರಸ್ತುತ ಶೇ.8.3 ಲಾಭಾಂಶ ಸಂಗ್ರಹ ಮಾಡಿದೆ. ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಿನ ಲಾಭವನ್ನು ಸಂಘ ಗಳಿಸಿದ್ದು, ಇದಕ್ಕೆ ಸಂಘದ ಸರ್ವ ಸದಸ್ಯರು, ಆಡಳಿತ ಮಂಡಳಿ, ಸಿಬ್ಬಂದಿಯ ಪರಿಶ್ರಮವೇ ಕಾರಣ ಎಂದರು.

ತುಮಕೂರು ಜಿಲ್ಲೆಯಲ್ಲಿ 1400 ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಂಘಗಳಿದ್ದು, ಈ ಸಂಘಗಳಿಂದ ಒಕ್ಕೂಟಕ್ಕೆ ಪ್ರತಿನಿತ್ಯ 11 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ತುರುವೇಕೆರೆ ತಾಲ್ಲೂಕಿನಲ್ಲಿ ನಾನು ತುಮುಲ್ ನಿರ್ದೇಶಕನಾಗುವ ವೇಳೆ 22 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ರೈತರಿಗೆ ಗುಣಮಟ್ಟದ ದರ ಹಾಗೂ 5 ರೂ ಪ್ರೋತ್ಸಾಹ ಧನ ಸಿಗಲು ಬಿಎಂಸಿಗಳ ಪಾತ್ರ ದೊಡ್ಡದಾಗಿದೆ. ಈ ನಿಟ್ಟಿನಲ್ಲಿ 56 ಹೊಸ ಸಂಘಗಳ ಸ್ಥಾಪನೆ ಹಾಗೂ ಭಾರತ ಸರ್ಕಾರದ ಶುದ್ಧ ಹಾಲು ಉತ್ಪಾದನೆ ಯೋಜನೆ, ಎನ್.ಪಿ.ಡಿ.ಪಿ. ಮತ್ತು ಎನ್.ಡಿ.ಪಿ. ಮೂಲಕ 21 ಬಿಎಂಸಿಗಳ ಮಂಜೂರು ಮಾಡಿದ ನಂತರ ಕಳೆದ 12 ವರ್ಷದಲ್ಲಿ ತಿಂಗಳಿಗೆ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಜಿಲ್ಲೆಯ ಹಾಲು ಉತ್ಪಾದಕರ ಖಾತೆಗೆ ಪ್ರತಿ ತಿಂಗಳು 140 ಕೋಟಿ ರೂನಷ್ಟು ಹಣವನ್ನು ಜಮೆ ಮಾಡಲಾಗುತ್ತಿದೆ. ತುರುವೇಕೆರೆ ತಾಲ್ಲೂಕಿನಲ್ಲಿ ತಿಂಗಳಿಗೆ 13.50 ಕೋಟಿ ರೂ ಹಣವನ್ನು ನೇರವಾಗಿ ಡಿಸಿಸಿ ಬ್ಯಾಂಕ್ ಮೂಲಕ ಜಮೆ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 1.61 ಸಾವಿರ ಲೀಟರ್, ಬೆಂಗಳೂರಿನಲ್ಲಿ 2.21 ಸಾವಿರ ಲೀಟರ್, ಬೆಂಗಳೂರು, ತುಮಕೂರು ಮಾರುಕಟ್ಟೆಯಲ್ಲಿ 1.50 ಲಕ್ಷ ಲೀಟರ್ ಮೊಸರನ್ನು ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ ಜಿಲ್ಲೆಯ ಹಾಲನ್ನು ಮಹಾರಾಷ್ಟ್ರ, ಜಮ್ಮು ಕಾಶ್ಮೀರ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ. ಉತ್ತಮ ಗುಣಮಟ್ಟದ ಹಾಲು ನಮ್ಮದಾಗಿರುವುದರಿಂದ ಇತರೆ ರಾಜ್ಯಗಳಲ್ಲೂ ಬೇಡಿಕೆಯಿದೆ ಎಂದ ಅವರು, ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರಿಗೆ ಪ್ರೋತ್ಸಾಹ ಧನವಾಗಿ 2 ರೂ ನೀಡಿದ್ದರು. ಅದನ್ನು ಸಿದ್ದರಾಮಯ್ಯ ಸರ್ಕಾರ 5 ರೂಗೆ ಹೆಚ್ಚಿಸಿದ್ದು ಅಂದಿನಿಂದ ಇಂದಿನವರೆಗೆ ರೈತರಿಗೆ 5 ರೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈ ಪ್ರೋತ್ಸಾಹ ಧನವನ್ನು 7 ರೂಗಳಿಗೆ ಹೆಚ್ಚಿಸುವಂತೆ ಎಲ್ಲಾ ಒಕ್ಕೂಟಗಳು ಬೇಡಿಕೆ ಇಟ್ಟಿವೆ. ಈ ಬಗ್ಗೆ ಬಜೆಟ್ ನಲ್ಲಿ ತೀರ್ಮಾನವಾಗುವ ಸಾಧ್ಯತೆ ಇದೆ. ಪ್ರಣಾಳಿಕೆ ಸಮಿತಿ ಅಧ್ಯಕ್ಷರು ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಅವರಾಗಿರುವುದರಿಂದ ಬೇಡಿಕೆ ಈಡೇರುವ ಸಾಧ್ಯತೆ ದಟ್ಟವಾಗಿದೆ. ಪ್ರೋತ್ಸಾಹ ಧನ 7 ರೂಗೆ ಹೆಚ್ಚಳವಾದರೆ ಖಾಸಗಿ ಡೈರಿಗಳ ವ್ಯವಸ್ಥೆ ತಪ್ಪುತ್ತದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಕೊಡಗೀಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಸಿ.ತೋಪೇಗೌಡ ವಹಿಸಿದ್ದರು. ಸಭೆಯಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. 2025-26 ನೇ ಸಾಲಿನಲ್ಲಿ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ವಿಸ್ತರಣಾಧಿಕಾರಿ ಎಸ್.ದಿವಾಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಸಿದ್ದಲಿಂಗಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ದೇವರಾಜ್, ಸಂಘದ ಉಪಾಧ್ಯಕ್ಷ ಹೆಚ್.ಆರ್. ನಂಜೇಗೌಡ, ನಿರ್ದೇಶಕರಾದ ಹೊನ್ನಪ್ಪ, ಹೆಚ್.ಆರ್.ಪ್ರಕಾಶ್, ಹೆಚ್.ಆರ್. ವೇಣುಗೋಪಾಲ್, ಕೆ.ಪಿ.ಮಹೇಶ್, ನಾಗರಾಜು, ಮೋಹನ್ ಕುಮಾರ್, ಕುಮಾರ್, ಕೆಂಪಮ್ಮ, ಪ್ರೇಮಾ, ಕಾರ್ಯದರ್ಶಿ ಕೆ.ಎಸ್.ಪ್ರಭುಸ್ವಾಮಿ, ಹಾಲು ಪರೀಕ್ಷಕ ಕೆ.ಎಸ್.ಪುನೀತ್, ಸಹಾಯಕ ಕಾಂತರಾಜು ಸೇರಿದಂತೆ ಹಾಲು ಉತ್ಪಾದಕ ಸದಸ್ಯರು, ರೈತರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್


