ಬೆಂಗಳೂರು: ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸರ್ಕಾರದ ಮಂತ್ರಿ ಮಂಡಲದಲ್ಲಿ ಖಾತೆ ಹಂಚಿಕೆ ವಿಚರವಾಗಿ ಆರಂಭವಾಗಿರುವ ಅಸಮಾಧಾನ, ಸಚಿವರ ರಾಜೀನಾಮೆ ವಿಚಾರವಾಗಿ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ವಿಧಾನಸಭೆಯಲ್ಲಿ ಪ್ರತಿಪಕ್ಷದವರಿಗೆ ಉತ್ತರ ಕೊಡಲು ಸಾಧ್ಯವಾಗದ ಅಸಮರ್ಥ ಮಂತ್ರಿಮಂಡಲ ಸರ್ಕಾರದಲ್ಲಿದೆ ಎಂದು ಕುಟುಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ಡಿ.ಕೆ.ಶಿವಕುಮಾರ್ ಅವರ ಹಳೇ ಸಿನಿಮಾ ಹೊಸ ಪೋಸ್ಟರ್ ಗೆ ರಿಲೀಸ್ ಆಗುವ ಮೊದಲೇ ದಂಗೆ ಶುರುವಾಗಿದೆ.
ಪ್ರಮಾಣವಚನ ಸ್ವೀಕರಿಸಿದ ಮೂರೇ ದಿನಗಳಲ್ಲಿ ಮೂರು ಪಾಲಾಗಿದೆ. ರಾಮಲಿಂಗಾರೆಡ್ಡಿ ನಗರಾಭಿವೃದ್ಧಿ ಖಾತೆ ಕೊಟ್ಟಿಲ್ಲ ಎಂದು ರಾಜೀನಾಮೆ ನೀಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ನತರಭಾವೃದ್ಧಿ ಖಾತೆ ಕೊಡುವುದಾಗಿ ಡಿ.ಕೆ.ಶಿವಕುಮಾರ್ ಮಾತುಕೊಟ್ಟಿದ್ದರು. ಮುಖ್ಯಮಂತ್ರಿಯಾಗುವವರೆಗೂ ಮಾತು ಕೊಟ್ಟು, ಈಗ ಕೈಕೊಟ್ಟಿದ್ದಾರೆ. ರಾಮಲಿಂಗಾರೆಡ್ಡಿಯಂತಹ ಹಿರಿಯರು, 8 ಬಾರಿ ಶಾಸಕರಾಗಿ ಬೆಂಗಳೂರಿನ ಬಗ್ಗೆ ಅರಿವು ಇರುವವರು.
ಅಂತಹ ಶಾಸಕರು ನಗರಾಭಿವೃದ್ಧಿ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರಿಗೆ ಈ ರೀತಿ ಮಾತುಕೊಟ್ಟು ಮೋಸ ಮಾಡುವ ಪದ್ಧತಿ ಇದೆಯಲ್ಲ ಅದು ಸರಿಯಲ್ಲ ಎಂದು ಗುಡುಗಿದರು.
ಪ್ರಮಾಣವಚನ ಸ್ವೀಕರಿಸಿದ ಮೂರೇ ದಿನಕ್ಕೆ ಕೊಟ್ಟ ಮಾತನ್ನು ತಪ್ಪುವ ಚಾಳಿಯನ್ನು ಡಿ.ಕೆ.ಶಿವಕುಮಾರ್ ಪ್ರಾರಂಭಿಸಿದ್ದಾರೆ. ಇನ್ನೆಷ್ಟು ಜನಕ್ಕೆ ಏನೇನು ಮಾತುಕೊಟ್ಟಿದ್ದಾರೋ? ಸತೀಶ್ ಜಾರಕಿಹೊಳಿಯವರಿಗೂ ಮಾತುಕೊಟ್ಟಿದ್ದರಂತೆ ನಿಮಗೆ ಕೆಪಿಸಿಸ್ ಅಧ್ಯಕ್ಷ ಸ್ಥಾನ ಕೊಡುತ್ತೇನೆ, ಲೋಕೋಪಯೋಗಿ ಸಚವನನ್ನಾಗಿ ಮಾಡುತ್ತೇನೆ ಎಂದು.
ಅವರು ಕೂಡ ತನಗೆ ಮೋಸಮಾಡಿದ್ದಾರೆ ಎಂದಿದ್ದಾರೆ. ಇನ್ನು ಹೆಚ್.ಕೆ.ಪಾಟೀಲ್ ಅವರು ಕಾನೂನು ಸಚಿವರಾಗಿದ್ದವರು. ಅವರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ ಎಂದರು.
ಇಂದು ಮುನಿಯಪ್ಪನವರು ಕೂಡ ಖಾತೆ ಬಗ್ಗೆ ಕ್ಯಾತೆ ತೆಗೆದಿದ್ದಾರೆ. ಒಟ್ಟಾರೆ ಡಿ.ಕೆ.ಶಿವಕುಮಾರ್ ಅವರಿಗೆ ಸರ್ಕಾರದ ಮೇಲೆ ಹಿಡಿತವಿಲ್ಲ. ಅಸಮರ್ಥರಾಗಿದ್ದಾರೆ ಎಂಬುದು ಅರ್ಥವಾಗುತ್ತಿದೆ. ಮಂತ್ರಿ ಮಂಡಲದ ಮೇಲೆ ಅವರ ಹಿಡಿತ ತಪ್ಪಿದೆ.
ಎಲ್ಲರೂ ಕೂಡ ಖಾತೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎನ್ನುತ್ತಿದ್ದಾರೆ. ಇನ್ನು ಒಂದೂವರೆ ವರ್ಷದಲ್ಲಿ ಚುನಾವಣೆ ಬರುತ್ತದೆ. ಅದಕ್ಕೂ ಮುನ್ನವೇ ಬಂಡಾಯವೆದ್ದಿರುವುದು ಕಾಂಗ್ರೆಸ್ ನಲ್ಲಿ ಒಳಜಗಳ, ಬೇಗುದಿ ಇದೆ.
ಮುಂದಿನ ದಿನಗಳಲ್ಲಿ ಇದು ಜ್ವಾಲಾಮುಖಿಯಾಗಲಿದೆ ಎಂಬುದನ್ನು ಸೂಚಿಸುತ್ತದೆ. ಕಾಂಗ್ರೆಸ್ ಪಾರ್ಟಿ ಒಡೆದ ಮನೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ವಿಧಾನಸಭೆಯಲ್ಲಿ ವಿಪಕ್ಷಗಳಿಗೆ ಉತ್ತರ ಕೊಡಲು ಗತಿಯಿಲ್ಲ ಅಂತಹ ಸ್ಥಿತಿಯಲ್ಲಿರುವ ಮಂತ್ರಿಮಂಡಲ ರಾಜ್ಯದಲ್ಲಿದೆ. ಸಿದ್ದರಾಮಯ್ಯನವರಿಲ್ಲ, ಹೆಚ್.ಕೆ.ಪಾಟೀಲ್ ಇಲ್ಲ. ಅಂದರೆ ಸಮರ್ಥವಾದ ಆಡಳಿತ ಪಕ್ಷವೇ ಇಲ್ಲದಂತಾಗಿದೆ.
ವಿಧಾನಸಭೆಯಲ್ಲಿ ಸಮರ್ಥವಾಗಿ ಉತ್ತರಿಸಬೇಕಾದ ಕಾಂಗ್ರೆಸ್ ಆಡಳಿತ ಪಕ್ಷ ಇಲ್ಲ, ಶೂನ್ಯವಾಗಿದೆ. ನಾವು ವಿಧಾನಸಭೆಯಲ್ಲಿ ಯಾರ ಜೊತೆ ಚರ್ಚಿಸಬೇಕು ಎಂಬುದೇ ಪ್ರಶ್ನೆಯಾಗಿದೆ ಎಂದು ಟೀಕಿಸಿದರು.

