ಸೇಡಂ: ಕೇಂದ್ರ ಸರಕಾರವು ಐತಿಹಾಸಿಕವಾಗಿ ಜಾರಿಗೆ ತಂದಿರುವ ಶೇ.33 ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ದಿನಗಳಲ್ಲಿ ಮಹಿಳೆಯರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸಂತೋಷಿರಾಣಿ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು.
ನಗರದಲ್ಲಿ ಬಿಜೆಪಿ ಮಹಿಳಾ ಘಟಕದಿಂದ ಕಾಂಗ್ರೆಸ್ ವಿರುದ್ಧ ನಾರಿ ಶಕ್ತಿ ಫೋರಂ ಜನಾಕ್ರೋಶ ಮಹಿಳಾ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಇರುವ ಮಹಿಳೆಯರಿಗೆ ರಾಜಕೀಯ ಪ್ರಾಧಾನ್ಯತೆ ನೀಡಲು ಪ್ರಧಾನಿ ನರೇಂದ್ರ ಮೋದಿ ಬದ್ದರಾಗಿದ್ದಾರೆ. ಆದರೆ, ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಈ ಮಸೂದೆಗೆ ಅಡ್ಡಗಾಲು ಹಾಕುವ ಮೂಲಕ ತಮ್ಮ ಮಹಿಳಾ ವಿರೋಧಿ ಧೋರಣೆಯನ್ನು ಪ್ರದರ್ಶಿಸುತ್ತಿವೆ ಎಂದರು.
ಸೇಡಂ ಶಾಸಕ ಶರಣಪ್ರಕಾಶ್ ಪಾಟೀಲ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಡಿಸಿಸಿ ಬ್ಯಾಂಕ್ ಮೂಲಕ ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡುವ ಯೋಜನೆಯನ್ನು ತಡೆಯಲು ಶಾಸಕರು ಪತ್ರ ಬರೆದಿದ್ದಾರೆ. ಇದು ಅವರು ಮಹಿಳಾ ಅಭಿವೃದ್ಧಿಯ ವಿರೋಧಿ ಎಂಬುದಕ್ಕೆ ಸಾಕ್ಷಿ ಎಂದು ಆರೋಪಿಸಿದರು.
ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ತಾಲೂಕು ಅಧ್ಯಕ್ಷ ಶರಣು ಶಂಕರ ಮೆಡಿಕಲ್, ಎಸ್ ಸಿ ಎಸ್ಟಿ ಘಟಕದ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ ತೊಟ್ನಳ್ಳಿ, ಓಂಪ್ರಕಾಶ್ ಪಾಟೀಲ, ತಿರುಪತಿ ಶಬಾದಕರ್, ನಾಗಪ್ಪ ಕೊಳ್ಳಿ, ರಾಜು ಕಟ್ಟಿ, ಸಂಗಪ್ಪ ಕುಂಬಾರ, ಶರಣಪ್ಪ ಕೊಳ್ಳಿ, ಸಿದ್ದು ಊಡಗಿ, ಮಹಾವೀರ ಅಳ್ಳೊಳ್ಳಿ, ವಿಜಯ ಕುಮಾರ ಪಾಟೀಲ್, ರಾಮು ಕಣೆಕಲ್, ವಿರೇಶ ಹೂಗಾರ, ರಾಘವೇಂದ್ರ ಮೆಕ್ಯಾನಿಕ್, ವಿನೋದ ಸಾಹುಕಾರ್, ಮಹಾದೇವಪ್ಪ ಗೋಣಿ, ಬಾಲರಾಜ ಕೊಡಸಾ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಗೌರಿ ಚಿತಕೊಟಿ, ತಾಲೂಕಾಧ್ಯಕ್ಷ ಶೈಲಜಾ ಹಿತ್ತಲ, ಮಹಾನಂದ, ಚನ್ನಮ್ಮ ಪಾಟೀಲ, ಶಿಲ್ಪಾ ಮಾಲಿಪಾಟೀಲ, ಭಾಗ್ಯಶ್ರೀ ನಾಯಿಕೊಡಿ ಸೇರಿದಂತೆ ಅನೇಕರಿದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್.

