ಬೆಂಗಳೂರು: ಲಿಂಗಾಯತ-ವೀರಶೈವರನ್ನು ಯಾವುದೇ ಶಕ್ತಿಯಿಂದ ಬೇರೆ ಮಾಡಲು ಸಾಧ್ಯವೇ ಇಲ್ಲ, ನಾವು ಎಂದೆಂದೂ ಒಂದೇ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರು ವಿಜಯನಗರದ ಸುಜ್ಞಾನಮಂದಿರದಲ್ಲಿಂದು ನಡೆದ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದ ಅವರು, ಕೆಲವರು ಪದೇ ಪದೇ ವೀರಶೈವರೇ ಬೇರೆ, ಲಿಂಗಾಯತರೇ ಬೇರೆ ಎಂದು ಒಡಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.
ಸಂಘಟನೆಯಲ್ಲಿ ಬಲವಿದೆ, ವಿಘಟನೆಯಲ್ಲಿ ದೌರ್ಬಲ್ಯವಿದೆ ಎಂಬುದನ್ನು ನಾವು ಅರಿಯಬೇಕು. ಒಡಕು ಮೂಡಿಸುವವರ ವಿರುದ್ಧ ಎಚ್ಚರದಿಂದ ಇರಬೇಕು ಎಂದರು.
ಕೆಲವರು ಸ್ವಾರ್ಥಕ್ಕಾಗಿ ಧರ್ಮ, ಧರ್ಮಗಳ ನಡುವೆ ಒಡಕು ಉಂಟು ಮಾಡುತ್ತಿದ್ದರೆ, ಮತ್ತೆ ಕೆಲವರು ಜಾತಿ ಜಾತಿಗಳ ನಡುವೆ ವೈಮನಸ್ಯ ಹುಟ್ಟು ಹಾಕುವ ಕೆಲಸ ಮಾಡುತ್ತಿದ್ದಾರೆ. ವೀರಶೈವ ಮತ್ತು ಲಿಂಗಾಯತರು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ನಾವೆಂದೆಂದೂ ಒಂದೇ ಎಂದರು.
ವೀರಶೈವ ಮತ್ತು ಲಿಂಗಾಯತರು ಬೇರೆ ಬೇರೆ ಅಲ್ಲ, ಒಂದೇ ಎಂದು ತುಮಕೂರು ಸಿದ್ದಗಂಗಾಮಠದ ಪರಮಪೂಜ್ಯ ನಡೆದಾಡುವ ದೇವರು ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರೇ ಹೇಳಿದ್ದಾರೆ. ನಮ್ಮ ಸಮಾಜ ಅದನ್ನು ಪಾಲಿಸಬೇಕು ಎಂದರು.
ಈ ಸ್ಪರ್ಧಾತ್ಮಕ ಯುಗದಲ್ಲಿ, ಜ್ಞಾನಾಧಾರಿತ ಸಮಾಜದಲ್ಲಿ ವಿದ್ಯಾವಂತ ಮತ್ತು ಬುದ್ಧಿವಂತರಷ್ಟೇ ಗೆಲ್ಲಲು ಸಾಧ್ಯ. ನಮ್ಮ ಸಮಾಜದ ಯುವಜನರು ಬಾಹ್ಯ ಮೋಹಗಳಿಗೆ ಒಳಗಾಗದೆ ಶ್ರದ್ಧೆಯಿಂದ ಓದಿ, ಉನ್ನತ ಗುರಿ ಇಟ್ಟುಕೊಂಡು ಉದ್ಯಮಪತಿಗಳಾಗಿ ಉದ್ಯೋಗ ನೀಡುವವರಾಗಬೇಕೇ ಹೊರತು, ಉದ್ಯೋಗ ಬೇಡುವವರಾಗಬಾರದು ಎಂದರು.


