ಬೆಂಗಳೂರು: ಮೊದಲ ಪತ್ನಿ ಜೀವಂತವಾಗಿರುವಾಗ ಅಥವಾ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನ ನಡೆಯುವ ಯಾವುದೇ ಎರಡನೇ ವಿವಾಹವು ಕಾನೂನುಬದ್ಧವಾಗಿ ಅಸಿಂಧುವಾಗಲಿದೆ. ಇಂತಹ ಮದುವೆಗಳನ್ನು ರದ್ದುಪಡಿಸಲು ಪ್ರತ್ಯೇಕವಾಗಿ ನ್ಯಾಯಾಲಯದಲ್ಲಿ ದಾವೆ ಹೂಡುವ ಅಗತ್ಯವೇ ಇರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ.
ತುಮಕೂರಿನ ಕುವೆಂಪು ನಗರದ ನಿವಾಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಎರಡು ಪ್ರತ್ಯೇಕ ಮರುಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿದೆ.
ಅಲ್ಲದೆ, "ಇಬ್ಬರ ಮದುವೆ ಅಸಿಂಧು ಎಂದು ಒಪ್ಪಿಕೊಂಡ ಮೇಲೆಯೂ, ವಿವಾಹ ರದ್ದತಿಗಾಗಿ ಅರ್ಜಿದಾರರು ಪ್ರತ್ಯೇಕ ಸಿವಿಲ್ ಪ್ರಕರಣ ದಾಖಲಿಸಿಕೊಳ್ಳಬಹುದು" ಎಂದು ತುಮಕೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ನಿರ್ದೇಶನವು ಕಾನೂನು ಬಾಹಿರ ಎಂದು ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ:
ತುಮಕೂರು ಮೂಲದ ವ್ಯಕ್ತಿಯೊಬ್ಬರು ಅರ್ಜಿದಾರ ಮಹಿಳೆಯನ್ನು 2018ರ ನವೆಂಬರ್ 21ರಂದು ಎರಡನೇ ವಿವಾಹವಾಗಿದ್ದರು.
ಆದರೆ, ಈ ಮದುವೆಯಾಗುವ ಮೊದಲೇ ಆ ವ್ಯಕ್ತಿಗೆ ಮತ್ತೊಬ್ಬ ಮಹಿಳೆಯೊಂದಿಗೆ ಮೊದಲ ವಿವಾಹ ನಡೆದಿತ್ತು ಹಾಗೂ ಆ ವೈವಾಹಿಕ ಬಂಧ ಚಾಲ್ತಿಯಲ್ಲಿತ್ತು. ತದನಂತರ, ಆ ವ್ಯಕ್ತಿ 2019ರ ಜೂನ್ 13ರಂದು ತನ್ನ ಮೊದಲ ಪತ್ನಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡಿದ್ದನು.


