ತುರುವೇಕೆರೆ : 2026-27 ನೇ ಸಾಲಿನ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜುಲೈ 16 ರಂದು ಗುರುವಾರ ಸಂಜೆ 5 ಗಂಟೆಗೆ ಪಟ್ಟಣದ ಚೌದ್ರಿ ಕನ್ವೆಂಷನ್ ಹಾಲ್ ನಲ್ಲಿ ಏರ್ಪಡಿಸಲಾಗಿದೆ ಎಂದು ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ವಿ.ಆರ್.ಉಮೇಶ್ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದೊಂದು ದಶಕದಿಂದ ರೋಟರಿ ಕ್ಲಬ್ ತುರುವೇಕೆರೆ ತಾಲ್ಲೂಕಿನಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಹೊಸ ತಂಡ ಅಧಿಕಾರಕ್ಕೆ ಬರಲಿದ್ದು, ಜುಲೈ 16 ರಂದು ಪದಗ್ರಹಣ ಸಮಾರಂಭ ನಡೆಸಲಾಗುವುದು. ರೋಟರಿ ನೂತನ ಅಧ್ಯಕ್ಷ ಸಂತೋಷ್ ಡಿ., ಕಾರ್ಯದರ್ಶಿ ಉಪೇಂದ್ರ ಕುಮಾರ್ ಟಿ.ಕೆ., ಖಜಾಂಚಿ ಸುನಿಲ್ ಸಿ.ಆರ್. ಹಾಗೂ ತಂಡಕ್ಕೆ ಜಿಲ್ಲಾ ಪಾಲಕ ರೋ.ರವಿಶಂಕರ್ ಡಕೋಜು ಪ್ರಮಾಣವಚನ ಬೋದಿಸಲಿದ್ದಾರೆ. ತಮ್ಮಡಿಹಳ್ಳಿ ವಿರಕ್ತಮಠದ ಶ್ರೀ ಡಾ.ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಲಿದ್ದು, ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ಧಾರೆ. ವೈದ್ಯ ಡಾ.ನಾಗರಾಜ್ ಅವರಿಗೆ ಗೌರವ ಅಭಿನಂದನೆ ಸಲ್ಲಿಸಲಾಗುವುದು. ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ಮಸಾಲಾ ಜಯರಾಮ್, ಎಂ.ಡಿ.ಲಕ್ಷ್ಮೀನಾರಾಯಣ್, ಬೆಮೆಲ್ ಕಾಂತರಾಜು, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಎಐಸಿಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡ ಸೇರಿದಂತೆ ರೋಟರಿ ಜಿಲ್ಲಾ ಪದಾಧಿಕಾರಿಗಳು, ಗಣ್ಯರು ಆಗಮಿಸಲಿದ್ದಾರೆ ಎಂದರು.
ನಿಯೋಜಿತ ಅಧ್ಯಕ್ಷ ಸಂತೋಷ್ ಡಿ. ಮಾತನಾಡಿ, 2026-27 ನೇ ಸಾಲಿಗೆ ನನ್ನನ್ನು ರೋಟರಿ ಸಂಸ್ಥೆಯ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ಸರ್ವ ಸದಸ್ಯರಿಗೆ ಧನ್ಯವಾದಗಳು. ಈ ವರ್ಷ ಸಂತೋಷ ಸೇವಾ ಸ್ಪರ್ಶ @ 12 ಎಂಬ ಹೆಸರಿನಡಿಯಲ್ಲಿ ಸೇವಾ ಕಾರ್ಯಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಪದಾಧಿಕಾರಿಗಳ ಪದಗ್ರಹಣ ಸಮಾರಂಭದಂದು 12 ವಿಶೇಷ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಪರಿಸರ ಸಂರಕ್ಷಣೆ ಈ ವರ್ಷದ ಸಂಸ್ಥೆಯ ಪ್ರಮುಖ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಅತಿ ಹೆಚ್ಚು ಸಸಿ ನೆಟ್ಟು ಪರಿಸರ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಜವಾಬ್ದಾರಿಯಾಗಿದೆ ಎಂದರು.
ಪದಗ್ರಹಣ ಸಮಾರಂಭದಂದು ಸರ್ಕಾರಿ ಕಾಲೇಜು, ಬಸ್ ನಿಲ್ದಾಣದಲ್ಲಿ ಸ್ಯಾನಿಟರಿ ಪ್ಯಾಡ್ ಮೆಷಿನ್ ಅಳವಡಿಕೆ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ 10 ಬಡ ವಿದ್ಯಾರ್ಥಿಗಳಿಗೆ ಪಡೆದವರಿಗೆ ವಿದ್ಯಾರ್ಥಿ ವೇತನ, ದೊಂಬರನಹಳ್ಳಿ, ಕೆ.ಮಾವಿನಹಳ್ಳಿ ಶಾಲೆಗೆ 300 ಪುಸ್ತಕ ವಿತರಣೆ, ಪತ್ರಿಕೆ ಹಂಚುವ ಹುಡುಗರಿಗೆ ಹಾಗೂ ಗ್ಯಾಸ್ ವಿತರಣೆ ಮಾಡುವವರಿಗೆ ರೈನ್ ಕೋಟ್ ವಿತರಣೆ, ಇಬ್ಬರು ವಿಕಲಚೇತನರಿಗೆ ವ್ಹೀಲ್ ಛೇರ್, ಎರಡು ಅಂಗನವಾಡಿಗೆ ಅಲ್ಮೇರಾ, ಪುಟಾಣಿ ಮಕ್ಕಳು ಕುಳಿತುಕೊಳ್ಳಲು 40 ಛೇರ್ ವಿತರಣೆ, ಶಾಲೆಗೆ ಗ್ರೀನ್ ಬೋರ್ಡ್, ಹೊಣಕೆರೆ ಶಾಲೆಗೆ ಪೋಡಿಯಂ, ಪ್ರಗತಿಪರ ಬಡರೈತರೊಬ್ಬರಿಗೆ ಔಷಧಿ ಸಿಂಪಡಣೆ ಸಲಕರಣೆ ವಿತರಣೆ ಹಾಗೂ ವೈಯಕ್ತಿಕವಾಗಿ ಸಾರ್ವಜನಿಕರಿಗೆ ಅನಾರೋಗ್ಯ ಸಂದರ್ಭದಲ್ಲಿ ನೆರವಾಗುವ ಉದ್ದೇಶದಿಂದ ಅತಿ ಕಡಿಮೆ ದರದಲ್ಲಿ ಆಂಬುಲೆನ್ಸ್ ಒದಗಿಸುವ ಕಾರ್ಯಕ್ಕೆ ಪದಗ್ರಹಣ ಸಮಾರಂಭದಂದು ಚಾಲನೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರೋಟರಿ ಖಜಾಂಚಿ ಪ್ರಸನ್ನ, ಟ್ರಸ್ಟ್ ಅಧ್ಯಕ್ಷ ಸಾ.ಶಿ.ದೇವರಾಜ್, ಪದಾಧಿಕಾರಿಗಳಾದ ಶಿವರಾಜ್, ಪ್ರಭುಸ್ವಾಮಿ, ಬಸವರಾಜ್, ಜಯರಾಮ್ ಸೇರಿದಂತೆ ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್


