ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಕಬಂಧ ಬಾಹುಗಳಿಗೆ ಬ್ರೇಕ್ ಹಾಕಲು ಲೋಕಾಯುಕ್ತ ಹಂಟಿಂಗ್ ಮುಂದುವರಿದಿದೆ ಇಂದು ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಸಿಂಹಗಳು ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ಅನಿರೀಕ್ಷಿತ ದಾಳಿ ನಡೆಸಿ, ಕೋಟಿ ಕೋಟಿ ಲೂಟಿ ಹೊಡೆದಿದ್ದ ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದ್ದಾರೆ ಸದ್ಯ ಕಲಬುರಗಿ, ಚಿಕ್ಕಮಗಳೂರು ಹಾಗೂ ಬೀದರ್ ಸೇರಿದಂತೆ ಹಲವು ಜಿಲ್ಲೆಗಳ ಹೈಪ್ರೊಫೈಲ್ ಕಚೇರಿ ಮತ್ತು ನಿವಾಸಗಳಲ್ಲಿ ಲೋಕಾಯುಕ್ತ ಪೊಲೀಸರು ಬೀಡುಬಿಟ್ಟಿದ್ದು, ತೀವ್ರ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳು ಅಕ್ರಮ ಆಸ್ತಿ (Illegal property) ಗಳಿಸಿದ ಬಗ್ಗೆ ಸಾಲು ಸಾಲು ಆರೋಪಗಳು ಕೇಳಿಬಂದ ಹಿನ್ನೆಲೆ ಕಲಬುರಗಿ, ದಾವಣೆಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ.
ದಾವಣಗೆರೆ ಜಿಲ್ಲೆ: ಕೆಎಸ್ಆರ್ಟಿಸಿ ಚೀಫ್ ಮೆಕ್ಯಾನಿಕ್ ಮನೆಯಲ್ಲಿ ಬರೋಬ್ಬರಿ ₹40 ಲಕ್ಷ ಕ್ಯಾಶ್
ದಾವಣಗೆರೆ: ಜಿಲ್ಲಾ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ಮೂರು ಅಧಿಕಾರಿಗಳ ಒಟ್ಟು 12 ಸಿಂಹದಂತಹ ತಂಡಗಳು ಏಕಕಾಲಕ್ಕೆ 12 ಕಡೆ ಭರ್ಜರಿ ಹಂಟಿಂಗ್ ನಡೆಸಿವೆ ಹುಬ್ಬಳ್ಳಿಯಲ್ಲಿ ಕೆಎಸ್ಆರ್ಟಿಸಿ (ವಾಯವ್ಯ) ಚೀಫ್ ಮೆಕ್ಯಾನಿಕ್ ಆಗಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಿದ್ದೇಶ್ವರ ಹೆಬ್ಬಾಳ್ ಅವರಿಗೆ ಲೋಕಾಯುಕ್ತ ಪೊಲೀಸರು ಸರಿಯಾದ ಶಾಕ್ ನೀಡಿದ್ದಾರೆ.
ಇವರಿಗೆ ಸೇರಿದ ದಾವಣಗೆರೆ ನಗರದ ಆಂಜನೇಯ ಬಡಾವಣೆ ನಿವಾಸ, ಹುಬ್ಬಳ್ಳಿ ಕಚೇರಿ ಸೇರಿದಂತೆ 4 ಪ್ರಮುಖ ಅಡಗುತಾಣಗಳ ಮೇಲೆ ದಾಳಿ ನಡೆದಿದ್ದು, ಪರಿಶೀಲನೆ ವೇಳೆ ಸಿದ್ದೇಶ್ವರ ಹೆಬ್ಬಾಳ್ ಮನೆಯಲ್ಲಿ ಕಂತೆ ಕಂತೆ ನೋಟುಗಳ ರೂಪದಲ್ಲಿದ್ದ ಬರೋಬ್ಬರಿ ₹40 ಲಕ್ಷ ನಗದು ಪತ್ತೆಯಾಗಿದ್ದು, ಅಧಿಕಾರಿಗಳೇ ದಂಗಾಗಿದ್ದಾರೆ


