ಬೈಲಹೊಂಗಲ : ಶ್ರಾವಣ ಮಾಸದ ಪ್ರಮುಖ ಹಬ್ಬವಾದ ನಾಗಪಂಚಮಿ ಆಚರಣೆಗೆ ನಗರ ಹಾಗೂ ತಾಲೂಕಿನ ಜನತೆ ಸಜ್ಜಾಗಿದ್ದಾರೆ. ಆಗಸ್ಟ್ 16 ಮತ್ತು 17ರಂದು ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮಹಿಳೆಯರು ಹಾಗೂ ಮಕ್ಕಳು ಜೋಕಾಲಿ ಆಡುವುದು, ಸಾಂಪ್ರದಾಯಿಕ ತಿನಿಸುಗಳನ್ನು ಸವಿಯುವ ಮೂಲಕ ಹಬ್ಬ ಆಚರಿಸಲು ಸಿದ್ಧತೆ ನಡೆಸಿದ್ದಾರೆ.
ನಾಗಪಂಚಮಿ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ನಾನಾ ಬಗೆಯ ಉಂಡಿಗಳ ಮಾರಾಟ ಭರದಿಂದ ಸಾಗಿದೆ. ಶೇಂಗಾ, ಎಳ್ಳು, ರವೆ, ಬುಂದಿ, ಬೇಸನ್, ಖಾರದಾನಿ, ಗುಳ್ಳಡಕಿ ಸೇರಿದಂತೆ ಹತ್ತಾರು ಬಗೆಯ ಉಂಡಿಗಳು ಸ್ವೀಟ್ ಮಾರ್ಟ್ಗಳಲ್ಲಿ ಲಭ್ಯವಿದ್ದು, ಕೆಜಿಗೆ ₹180ರಿಂದ ₹300ರವರೆಗೆ ದರವಿದೆ. ಚಕ್ಕುಲಿ, ಚೋಡಾ ಸೇರಿದಂತೆ ಖಾರದ ತಿಂಡಿಗಳಿಗೂ ಬೇಡಿಕೆ ಹೆಚ್ಚಾಗಿದೆ.
ಹಿಂದೆ ನಾಗಪಂಚಮಿ ಸಂದರ್ಭದಲ್ಲಿ ಮನೆಯಲ್ಲಿಯೇ ಉಂಡಿಗಳನ್ನು ತಯಾರಿಸುವುದು ವಾಡಿಕೆಯಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಮಯದ ಅಭಾವದಿಂದಾಗಿ ಮಾರುಕಟ್ಟೆಯಲ್ಲಿ ಸಿದ್ಧವಾಗಿ ದೊರೆಯುವ ಉಂಡಿಗಳ ಖರೀದಿಗೆ ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಸಿಹಿ ತಿಂಡಿ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ.
ಇದೇ ವೇಳೆ ರಾಯಣ್ಣ ವೃತ್ತದಲ್ಲಿ ಕುಂಬಾರ ಕುಟುಂಬಗಳು ಮಣ್ಣಿನಿಂದ ತಯಾರಿಸಿದ ವಿವಿಧ ಬಗೆಯ ನಾಗಪ್ಪನ ಮೂರ್ತಿಗಳನ್ನು ಮಾರಾಟಕ್ಕೆ ಇಟ್ಟಿವೆ. ಒಂದು ಹೆಡೆ ಹಾಗೂ ಐದು ಹೆಡೆಯ ನಾಗಪ್ಪನ ಮೂರ್ತಿಗಳವರೆಗೆ ಲಭ್ಯವಿದ್ದು, ಭಕ್ತರು ಖರೀದಿಸುತ್ತಿದ್ದಾರೆ.
ನಗರದ ವಿವಿಧೆಡೆ ತೆರೆದಿರುವ ಅಳ್ಳುಬಟ್ಟಿಗಳಲ್ಲಿಯೂ ಜನದಟ್ಟಣೆ ಕಂಡುಬಂದಿದೆ. ಜನರು ಸರದಿ ಸಾಲಿನಲ್ಲಿ ನಿಂತು ಅಳ್ಳು ಹುರಿಸಿಕೊಂಡು ಮನೆಗೆ ಕೊಂಡೊಯ್ಯುತ್ತಿದ್ದಾರೆ. ಒಟ್ಟಾರೆ ನಾಗಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಬೈಲಹೊಂಗಲ ನಗರದ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ.
ವರದಿ : ದುಂಡಪ್ಪ ಹೂಲಿ


