ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ದಾರುಣ ಘಟನೆ ಸಂಭವಿಸಿದೆ. ಮದುವೆಯಾಗಿ ಕೇವಲ ನಾಲ್ಕು ತಿಂಗಳಾಗಿದ್ದ ನವವಿವಾಹಿತೆಯೊಬ್ಬರು ಮನೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶ್ವೇತಾ (25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತ ಶ್ವೇತಾ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಮೂಲದವರು ಎಂದು ತಿಳಿದುಬಂದಿದೆ.
ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಶ್ವೇತಾ ತಾನು ಪ್ರೀತಿಸಿದ ಯುವಕನ ಕೈಹಿಡಿದು ಹೊಸ ಜೀವನಕ್ಕೆ ಕಾಲಿಟ್ಟಿದ್ದರು.
ಮಗಳು ಚೆನ್ನಾಗಿರಲಿ ಅಂತ ಪೋಷಕರು ಕೂಡ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆದರೆ ಪ್ರೇಮ ವಿವಾಹವಾಗಿದ್ದ ಈ ಜೋಡಿಯ ಬದುಕಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ಬಿರುಗಾಳಿ ಎದ್ದಿದೆ.
ಗಂಡ-ಹೆಂಡತಿ ನಡುವೆ ಸದಾ ಜಗಳ ನಡೆಯುತ್ತಲೇ ಇತ್ತಂತೆ. ನಿನ್ನೆ ಕೂಡ ಇಬ್ಬರ ನಡುವೆ ಜೋರು ಗಲಾಟೆಯಾಗಿದ್ದು, ಇದಾದ ಬಳಿಕ ಮನನೊಂದ ಶ್ವೇತಾ ಮನೆಯಲ್ಲೇ ಫ್ಯಾನ್ಗೆ ನೇಣು ಬಿಗಿದುಕೊಂಡು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಶ್ವೇತಾ ಬರೆದಿಟ್ಟಿರುವ ಸ್ಫೋಟಕ ಡೆತ್ನೋಟ್ ಈಗ ಪೊಲೀಸರ ಕೈಸೇರಿದೆ. ಅದರಲ್ಲಿ ತನ್ನ ಸಾವಿಗೆ ಗಂಡ ಮತ್ತು ಗಂಡನ ಅಕ್ಕನೇ ಕಾರಣ ಎಂದು ನೇರವಾಗಿ ಆರೋಪ ಮಾಡಿದ್ದಾರೆ.
“ಅವರಿಂದ ನನಗೆ ತೀವ್ರ ಹಿಂಸೆ ಆಗುತ್ತಿದೆ, ಬದುಕೋಕೆ ಆಸೆಯೇ ಇಲ್ಲದಂತೆ ಮಾಡಿದ್ದಾರೆ. ನಾನು ಸತ್ತರೆ ಅವರನ್ನು ಮಾತ್ರ ಸುಮ್ಮನೆ ಬಿಡಬೇಡಿ” ಎಂದು ಶ್ವೇತಾ ಡೆತ್ನೋಟ್ನಲ್ಲಿ ಬರೆದಿದ್ದಾರೆ.
ಜೊತೆಗೆ “ಅಮ್ಮ ನನ್ನಿಂದ ತಪ್ಪಾಯಿತು ಕ್ಷಮಿಸಿಬಿಡು” ಅಂತಲೂ ಕೇಳಿಕೊಂಡಿದ್ದಾರೆ. ಪ್ರೀತಿಸಿದವನೇ ಈಕೆಯ ಪ್ರಾಣ ತೆಗೆದನಾ ಎಂಬ ಅನುಮಾನ ಈಗ ಕುಟುಂಬಸ್ಥರಲ್ಲಿ ಕಾಡುತ್ತಿದೆ.
ಇನ್ನು ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶ್ವೇತಾ ಅವರ ಕುಟುಂಬಸ್ಥರು ಊರಿನಿಂದ ಇನ್ನೂ ಬೆಂಗಳೂರಿಗೆ ಬಾರದ ಹಿನ್ನೆಲೆಯಲ್ಲಿ ಪೊಲೀಸರು ಶವವನ್ನು ಕೆಳಗಿಳಿಸದೆ ಕಾಯುತ್ತಿದ್ದಾರೆ.
ಆದರೆ ಡೆತ್ನೋಟ್ ಸಿಕ್ಕ ತಕ್ಷಣವೇ ಅಲರ್ಟ್ ಆದ ಪೊಲೀಸರು ಶ್ವೇತಾಳ ಪತಿಯನ್ನು ರಾತ್ರಿಯೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೋಷಕರು ಬಂದ ಬಳಿಕ ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯಲಿವೆ.


