ಬೆಳಗಾವಿ: ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕೋಡಣಿ ಗ್ರಾಮದಲ್ಲಿ ಕುತ್ತಿಗೆಗೆ ಜೋಕಾಲಿ ಸೀರೆ ಬಿಗಿದುಕೊಂಡು ಬಾಲಕಿ ಮೃತಪಟ್ಟಿದ್ದಾಳೆ.
ಕೋಡಣಿ ಗ್ರಾಮದ ವಿದ್ಯಾರ್ಥಿನಿ ಶುಭ್ರಾ ಯುವರಾಜ ರಾವುತ ಪಾಟೀಲ(14) ಮೃತಪಟ್ಟ ಬಾಲಕಿ. ಮನೆಯ ಜಂತಿಗೆ ಸೀರೆಯನ್ನು ಜೋಕಾಲಿಯಂತೆ ಕಟ್ಟಿ ಆಟ ಆಡುವಾಗ ಆಕಸ್ಮಿಕವಾಗಿ ಸೀರೆ ಕುತ್ತಿಗೆಗೆ ಬಿಗಿದುಕೊಂಡು ಶುಭ್ರಾ ಮೃತಪಟ್ಟಿದ್ದಾಳೆ.
ಮಳೆಯ ಕಾರಣ ಬುಧವಾರ ಶಾಲೆಗಳಿಗೆ ರಜೆ ಘೋಷಿಸಿದ್ದರಿಂದ ಬಾಲಕಿ ಮನೆಯಲ್ಲಿದ್ದಳು. ತಂದೆ, ತಾಯಿ ಕೆಲಸಕ್ಕೆ ಹೋಗಿದ್ದು, ಅಜ್ಜಿ ಪಂಢರಪುರ ಯಾತ್ರೆಗೆ ಹೋಗಿದ್ದರು.
ಅಜ್ಜ ಮಾತ್ರ ಮನೆಯಲ್ಲಿ ಇದ್ದರು. ಬಾಲಕಿ ಜೋಕಾಲಿ ಆಡುವಾಗ ಕುತ್ತಿಗೆಗೆ ಸೀರೆ ಬಿಗಿದುಕೊಂಡಿದ್ದನ್ನು ಕಂಡ ಅಜ್ಜ ಕಿರುಚಿದ್ದರಿಂದ ದೌಡಾಯಿಸಿದ ಅಕ್ಕಪಕ್ಕದವರು ಬಾಲಕಿಯನ್ನು ಸೀರೆ ಉರುಳಿನಿಂದ ಬಿಡಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಈ ವೇಳೆಗೆ ಬಾಲಕಿ ಶುಭ್ರಾ ಮೃತಪಟ್ಟಿದ್ದಾಳೆ ಎನ್ನಲಾಗಿದೆ.


