ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಆರ್.ಎಸ್.ಎಸ್. ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ಇಂದಿನಿಂದ ಮೂರು ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿದೆ.
ಡಾ. ಮೋಹನ್ ಭಾಗವತ್, ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಆರ್.ಎಸ್.ಎಸ್.ನ ಉನ್ನತ ನಾಯಕರು ಹಾಗೂ ಪ್ರಚಾರಕರು ಭಾಗವಹಿಸಲಿದ್ದಾರೆ.
ಬೆಳಗಾವಿಯ ಅನಗೋಳದ ಸಂತ ಮೀರಾ ಶಾಲೆ, ಶಾಸ್ತ್ರಿ ನಗರದಲ್ಲಿರುವ ಸಂಘದ ಕಚೇರಿ, ಉದ್ಯಮಬಾಗದ ಫೌಂಡ್ರಿ ಕ್ಲಸ್ಟರ್ ನಲ್ಲಿ ವಿವಿಧ ಹಂತದ ಸಭೆಗಳು ನಡೆಯಲಿವೆ.
ಸಂತ ಮೀರಾ ಶಾಲೆಯಲ್ಲಿ ಪ್ರಮುಖ ಚರ್ಚೆಗಳು ನಡೆಯಲಿದ್ದು, ಸಭೆ ನಡೆಯುವ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸಭೆಗೆ ಆಹ್ವಾನಿತರಿಗೆ ಮಾತ್ರ ಪ್ರದೇಶ ಕಲ್ಪಿಸಲಾಗಿದ್ದು, ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಸಂಘದ ಸರಸಂಘ ಚಾಲಕ ಡಾ. ಮೋಹನ್ ಭಾಗವತ್, ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹ ಸರಕಾರ್ಯವಾಹರಾದ ಡಾ. ಕೃಷ್ಣ ಗೋಪಾಲ, ಸಿ.ಆರ್. ಮುಕುಂದ, ಅರುಣಕುಮಾರ, ರಾಮದತ್ತ, ಅಲೋಕ್ ಕುಮಾರ್ ಸೇರಿದಂತೆ ಸಂಘದ ಹಿರಿಯ ಪದಾಧಿಕಾರಿಗಳು ಈಗಾಗಲೇ ಬೆಳಗಾವಿಗೆ ಆಗಮಿಸಿದ್ದಾರೆ,
11 ಕ್ಷೇತ್ರಗಳು, 46 ಪ್ರಾಂತಗಳ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು, ಸಹ ಕ್ಷೇತ್ರ ಪ್ರಚಾರಕರು, ಸಂಘ ಪರಿಗಣಿತ 32 ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳು ಸೇರಿ 130ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.


