ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ದೊಡ್ಡ ರಿಲೀಫ್ ನೀಡಿದೆ.
ಯೋಜನೆಗಳ ಮುಂದುವರಿಕೆ ಹಾಗೂ ಪರಿಷ್ಕರಣೆಗಾಗಿ ಫಲಾನುಭವಿಗಳು ಮತ್ತೆ ಸಾಲಿನಲ್ಲಿ ನಿಂತು ಮರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂಬ ಮಹತ್ವದ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ.
ಇಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸುವ ಬದಲು, ಸದ್ಯ ಸೌಲಭ್ಯ ಪಡೆಯುತ್ತಿರುವವರ ಪಟ್ಟಿಯನ್ನೇ ಮರುಪರಿಶೀಲನೆ ನಡೆಸಲು ಆಡಳಿತ ಮಂಡಳಿ ನಿರ್ಧರಿಸಿದೆ.
3 ದಿನಗಳಲ್ಲಿ ಪರಿಶೀಲನಾ ಮಾರ್ಗಸೂಚಿ ಸಿದ್ಧಕ್ಕೆ ಆದೇಶ
ಪ್ರಸ್ತುತ ಇರುವ ಫಲಾನುಭವಿಗಳ ಅರ್ಹತೆಯನ್ನು ತಳಮಟ್ಟದಲ್ಲಿ ಹೇಗೆ ಮತ್ತು ಯಾರು ಪರಿಶೀಲಿಸಬೇಕು ಎಂಬುದರ ಕುರಿತು ಕೇವಲ ಮೂರು ದಿನಗಳ ಒಳಗೆ ಸಮಗ್ರ ನೀತಿ-ನಿಯಮಗಳನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಲಾಗಿದೆ.
ಸರ್ಕಾರದ ಕಟ್ಟುನಿಟ್ಟಿನ ನಿಲುವು: ಸೌಲಭ್ಯಕ್ಕೆ ಅರ್ಹರಾಗಿರುವ ಯಾವುದೇ ಒಬ್ಬ ಬಡ ಕುಟುಂಬಕ್ಕೂ ಯೋಜನೆಯಿಂದ ವಂಚಿತವಾಗಬಾರದು. ಆದರೆ, ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅನರ್ಹರನ್ನು ಗುರುತಿಸಿ ತಕ್ಷಣವೇ ಪಟ್ಟಿಯಿಂದ ಕೈಬಿಡಬೇಕು.
ಸಾಲದ ಖಾತೆ ಬದಲಿಸಿದ ಗೃಹಿಣಿಯರಿಗೆ ಆತಂಕ ಬೇಡ
ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆಯಾದಾಗ, ಬ್ಯಾಂಕ್ ಸಾಲ ಹೊಂದಿದ್ದ ಮಹಿಳೆಯರ ಹಣವನ್ನು ಬ್ಯಾಂಕುಗಳು ಸಾಲದ ಮೊತ್ತಕ್ಕೆ ಕಡಿತ ಮಾಡಿಕೊಳ್ಳುತ್ತಿದ್ದವು. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಅನೇಕ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳನ್ನು ಬದಲಾಯಿಸಿಕೊಂಡಿದ್ದಾರೆ.
ಇಂತಹ ತಾಂತ್ರಿಕ ಬದಲಾವಣೆ ಮಾಡಿಕೊಂಡಿರುವ ಯಾವುದೇ ನೈಜ ಫಲಾನುಭವಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಭೆಯಲ್ಲಿ ಸೂಚಿಸಲಾಗಿದೆ.
ಮೃತರ ಖಾತೆಗೆ ಹಣ ವರ್ಗಾವಣೆ: ಲಗಾಮು ಹಾಕಲು ಸಜ್ಜು
ಗೃಹಜ್ಯೋತಿ ಯೋಜನೆ ಜಾರಿ ವೇಳೆ ವಹಿಸಿದ್ದ ಕಟ್ಟುನಿಟ್ಟಿನ ಕ್ರಮಗಳನ್ನು ಉಳಿದ ಯೋಜನೆಗಳಲ್ಲೂ ಪಾಲಿಸಿದ್ದರೆ ಅಕ್ರಮಗಳನ್ನು ತಡೆಯಬಹುದಿತ್ತು ಎಂದು ಸಭೆ ಅಭಿಪ್ರಾಯಪಟ್ಟಿದೆ.
ಪ್ರಮುಖವಾಗಿ, ಮೃತಪಟ್ಟ ಮಹಿಳೆಯರ ಹೆಸರಿನಲ್ಲೂ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಜಮೆಯಾಗುತ್ತಿರುವುದು ಪತ್ತೆಯಾಗಿದ್ದು, ಇಂತಹ ಲೋಪದೋಷಗಳನ್ನು ಸರಿಪಡಿಸಲು ಸರ್ಕಾರ ಮುಂದಾಗಿದೆ.
ಇನ್ನು ಮುಂದೆ ಧ್ವನಿ ಸಂದೇಶದ ಮೂಲಕ ಹಣ ಜಮೆ ಖಾತರಿ
ಗೃಹಲಕ್ಷ್ಮಿ ಯೋಜನೆಯ ಮಾಸಿಕ ಧನಸಹಾಯ ಮಹಿಳೆಯರ ಖಾತೆಗೆ ತಲುಪಿದ ತಕ್ಷಣ, ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ 'ವಾಯ್ಸ್ ಮೆಸೇಜ್' (ಧ್ವನಿ ಸಂದೇಶ) ಕಳುಹಿಸುವ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ಬ್ಯಾಂಕಿಗೆ ಅಲೆಯುವ ಅಗತ್ಯವಿಲ್ಲದೇ ತಮಗೆ ಹಣ ಬಂದಿರುವುದನ್ನು ಮಹಿಳೆಯರು ಸುಲಭವಾಗಿ ಖಚಿತಪಡಿಸಿಕೊಳ್ಳಬಹುದು.


