ಜಾರ್ಖಂಡ್: ಒಂದೆಡೆ ಸರ್ಕಾರಗಳು ಮಹಿಳೆಯರ ಸಬಲೀಕರಣದ ಬಗ್ಗೆ ಭಾಷಣ ಮಾಡುತ್ತವೆ, ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಘೋಷಿಸುತ್ತವೆ.
ಆದರೆ, ಹಗಲಿರುಳು ಕಷ್ಟಪಟ್ಟು ಕೆಲಸ ಮಾಡುವ ನೌಕರರಿಗೆ ತಿಂಗಳ ಸಂಬಳ ನೀಡಲು ಮಾತ್ರ ಮೀನಾಮೇಷ ಎಣಿಸುತ್ತವೆ. ಇದಕ್ಕೆ ತಾಜಾ ಉದಾಹರಣೆ ಜಮ್ಶೆಡ್ಪುರದ ಎಂಜಿಎಂ ಆಸ್ಪತ್ರೆಯಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ನಡೆದಿದೆ.
ಜಮ್ಶೆಡ್ಪುರದ ಎಂಜಿಎಂ (MGM) ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಹೋಂಗಾರ್ಡ್ ಸಿಬ್ಬಂದಿಯೊಬ್ಬರು, ಕಳೆದ ಐದು ತಿಂಗಳಿಂದ ತಮಗೆ ವೇತನ ಸಿಗದ ಕಾರಣಕ್ಕೆ ಕೆಲಸದ ಅವಧಿಯಲ್ಲೇ ಕಣ್ಣೀರು ಹಾಕಿದ್ದಾರೆ.
ಆರ್ಥಿಕ ಸಂಕಷ್ಟ ಮತ್ತು ಅನಾರೋಗ್ಯದಿಂದ ಕಂಗೆಟ್ಟಿರುವ ಈ ಅಧಿಕಾರಿ, ಆಸ್ಪತ್ರೆಯ ಆವರಣದಲ್ಲೇ ತನ್ನ ಅಳಲನ್ನು ತೋಡಿಕೊಳ್ಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ 5 ತಿಂಗಳಿಂದ ನಮಗೆ ಒಂದು ರೂಪಾಯಿ ಪಾವತಿಯಾಗಿಲ್ಲ. ಮನೆಯಲ್ಲಿ ತಿನ್ನಲು ಅನ್ನವಿಲ್ಲ, ಅನಾರೋಗ್ಯ ಪೀಡಿತಳಾದ ನನಗೆ ಚಿಕಿತ್ಸೆ ಪಡೆಯಲು ಹಣವಿಲ್ಲ. ಸಾಲಗಾರರ ಕಿರುಕುಳ ಹೆಚ್ಚಾಗಿದೆ. ಸಂಬಳ ನೀಡದಿದ್ದರೆ ನನಗೆ ಆತ್ಮ*ತ್ಯೆಯಲ್ಲದೆ ಬೇರೆ ದಾರಿಯಿಲ್ಲ ಎಂದು ಆಕೆ ಕಣ್ಣೀರಿಡುತ್ತಾ ಹತಾಶೆ ವ್ಯಕ್ತಪಡಿಸಿದ್ದಾರೆ.


