ಬೀದರ್: ಮರಾಠಾ ಸಮುದಾಯದ ಆಶಾಕಿರಣ, ಅನುಭವಿ ನಾಯಕರಾದ ಸಂತೋಷ್ ಲಾಡ್ ಅವರನ್ನು ನೂತನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮರಾಠಾ ಸಮುದಾಯದ ಗುರು ದಾದಾ ಮಹಾರಾಜ್ ನಗರಕರ್ ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಮರಾಠಾ ಸಮಾಜದ ವತಿಯಿಂದ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಂತೋಷ್ ಲಾಡ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎನ್ನುವುದು ಎಲ್ಲಾ ಮರಾಠಾ ಮತ್ತು ಒಬಿಸಿ ಸಮುದಾಯದ ಬೇಡಿಕೆಯಾಗಿದೆ ಎಂದರು.
ಸAತೋಷ್ ಲಾಡ್ ಅವರು ಎಲ್ಲ ಸಮುದಾಯದವರನ್ನು ಜೊತೆಗೂಡಿ ಕರೆದುಕೊಂಡು ಹೋಗುವಂತಹ ವ್ಯಕ್ತಿಯಾಗಿದ್ದಾರೆ. ಸರ್ವಧರ್ಮ ಸಮಬಾಳು ಎನ್ನುವುದು ಅವರ ಭಾವನೆಯಾಗಿದೆ. ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ವಿಚಾರದಿಂದ ಸಂತೋಷ್ ಲಾಡ್ ಅವರ ಕೆಲಸ ನಡೆಯುತ್ತದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಂತೋಷ್ ಲಾಡ್ ಅವರ ಯೋಗದಾನ ತುಂಬಾ ಇದೆ. ಅವರು ನಾಲ್ಕು ಬಾರಿ ಶಾಸಕ ಹಾಗೂ ಮೂರು ಬಾರಿ ಸಚಿವರಾಗಿದ್ದಾರೆ ಎಂದು ಹೇಳಿದರು.
ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಕರ್ನಾಟಕದ ತುಂಬೆಲ್ಲ ಅವರು ಒಳ್ಳೆ ಕೆಲಸ ಮಾಡಿದ್ದಾರೆ. ಅಂಗವಿಕಲರಿಗೆ ತಮ್ಮ ಫೌಂಡೇಶನ್ ವತಿಯಿಂದ ಬಹಳಷ್ಟು ಒಳ್ಳೆ ಕೆಲಸ ಮಾಡಿದ್ದಾರೆ. ಭಾರತದಲ್ಲಿ ಆಪತ್ತು ಬಂದಾಗ ಅವರು ದೌಡಾಯಿಸುತ್ತಾರೆ. ಜಮ್ಮು ಕಾಶ್ಮೀರದಲ್ಲಿ ದಾಳಿಯಾದಾಗ ತುಂಬಾ ಭಯದ ವಾತಾವರಣ ನಿರ್ಮಾಣವಾಗಿತ್ತು. ಅಂಥದರಲ್ಲಿ ಸಂತೋಷ್ ಲಾಡ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಎಲ್ಲಕ್ಕಿಂತ ಮೊದಲಿಗೆ ಅಲ್ಲಿಗೆ ಹೋಗಿ, ತಮ್ಮ ಜೀವದ ಹಂಗು ತೊರೆದು ಕರ್ನಾಟಕದ ಜನರನ್ನು ಸಂರಕ್ಷಣೆ ಮಾಡಿ ವಾಪಸ್ಸು ಕರೆತಂದಿದ್ದರು ಎಂದು ಅವರು ತಿಳಿಸಿದರು.
ಕೋವಿಡ್ ಸಮಯದಲ್ಲಿಯೂ ಕೂಡ ಅವರು ತುಂಬಾ ಕೆಲಸ ಮಾಡಿದ್ದಾರೆ. ಆದ್ದರಿಂದ ಸಂತೋಷ್ ಲಾಡ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆನ್ನುವುದು ಬೀದರ್ ಜಿಲ್ಲೆ ಸೇರಿದಂತೆ ಇಡೀ ಕರ್ನಾಟಕದ ಮರಾಠಾ ಸಮುದಾಯ ಹಾಗೂ ಒಬಿಸಿ ಸಮುದಾಯದವರ ಬೇಡಿಕೆಯಾಗಿದೆ. ಹಾಗಾಗಿ ಅವರನ್ನು ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಮರಾಠಾ ಕ್ರಾಂತಿ ಮೋರ್ಚಾದ ಆಯೋಜಕ ವೆಂಕಟರಾವ್ ಮಾಯಿಂದೆ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಮಾರಾಠಾ ಸಮಾಜದ ಸುಮಾರು 50 ರಿಂದ 60 ಲಕ್ಷ ಜನಸಂಖ್ಯೆಯಿದೆ. ಇಂದು ನಮ್ಮ ಸಮಾಜದ ಎಲ್ಲಾ ಪಕ್ಷದವರು ಇಲ್ಲಿ ಬಂದಿದ್ದೇವೆ. ನಾವು ಪಕ್ಷಕ್ಕೋಸ್ಕರ ಬಂದಿಲ್ಲ, ನಾವು ಸಮಾಜಕ್ಕೋಸ್ಕರ ಬಂದಿದ್ದೇವೆ. ನಮ್ಮ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಂತೋಷ್ ಲಾಡ್ ಅವರಿಗೆ ಸಚಿವ ಸ್ಥಾನ ಸಿಕ್ಕಿತ್ತು. ಇವಾಗ ಹೊಸ ಸರ್ಕಾರ ರಚನೆಯಾಗುತ್ತಿದೆ. ಈ ಹೊಸ ಸರ್ಕಾರದಲ್ಲಿ ಸಂತೋಷ್ ಲಾಡ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಇಲ್ಲಿವರೆಗೆ 10 ಸಾವಿರ ಬಡವರಿಗೆ ಉಚಿತವಾಗಿ ಬೋರ್ವೆಲ್ ಕೊರೆಸಿ ಕೊಟ್ಟಿದ್ದಾರೆ. 4 ಸಾವಿರ ಅಂಗವಿಕಲರಿಗೆ ಉಚಿತವಾಗಿ ವಾಹನಗಳು ನೀಡಿದ್ದಾರೆ. ಮಹಿಳೆಯರಿಗೆ ಸಹಾಯ ಮಾಡಿದ್ದಾರೆ. ಕಾರ್ಮಿಕರು ಹೊಲದಲ್ಲಿ ಕೆಲಸ ಮಾಡುವಾಗ ಅನಾಹುತವಾದರೆ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಇಂತಹ ಅನೇಕ ಕೆಲಸಗಳನ್ನು ಅವರು ಮಾಡಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಶಿವಾಜಿ ಸೇರಿದಂತೆ ಅನೇಕ ಮಹಾಪುರುಷರ ಸಿದ್ಧಾಂತದ ಮೇಲೆ ನಡೆಯುವ ಸಂತೋಷ್ ಲಾಡ್ ಅವರು ಎಲ್ಲ ಸಮುದಾಯದವರನ್ನು ತಮ್ಮ ಜೊತೆ ತೆಗೆದುಕೊಂಡು ಹೋಗುತ್ತಿದ್ದಾರೆ. ಆದ್ದರಿಂದ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮರಾಠಾ ಸಮಾಜದ ಜಿಲ್ಲಾಧ್ಯಕ್ಷ ದಿಗಂಬರರಾವ್ ಮಾನಕಾರಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ರಘುನಾಥರಾವ್ ಜಾಧವ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಆನಂದ್ ಪಾಟೀಲ್, ಡಿಸಿಸಿ ಬ್ಯಾಂಕಿನ ಸದಸ್ಯ ಕಿಶನರಾವ್ ಪಾಟೀಲ್, ಸಕಲ ಮರಾಠಾ ಸಮಾಜದ ಆಯೋಜಕರು ಪ್ರದೀಪ್ ಬಿರಾದಾರ್, ಪ್ರತೀಕ್ ಪಾಟೀಲ್, ಡಾ. ಜನಾರ್ಧನ್ ಬಿರಾದಾರ್, ತಾತ್ಯಾರಾವ್ ಪಾಟೀಲ್, ಅಂಗದರಾವ್ ಜಗತಾಪ್, ಕಿಶನರಾವ್ ಪಾಟೀಲ್, ಡಾ. ಕನಸೆ, ರಾಮರಾವ್ ಬಿರಾದಾರ್, ರೋಹಿತ್ ಮೆಂದೆ, ಸತೀಶ್ ವಾಸರೆ, ಅಮರ್ ಜಾಧವ್, ಅನಿಲ್ ಕಾಳೆ, ಸತೀಶ್ ಪಾಟೀಲ್, ತೇಜರಾವ್ ಮೂಳೆ, ಅಶೋಕ್ ಪಾಟೀಲ್, ಸಂತೋಷ್ ಜಾಧವ್, ಸತೀಶ್ ಬಿರಾದಾರ್, ಜ್ಞಾನೇಶ್ವರ್ ಪಾಟೀಲ್, ಅನಿತಾ ಭೋಸಲೆ ಹಾಗೂ ಮೀನಾಕ್ಷಿ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಸಂತೋಷ ಬಿಜಿ ಪಾಟೀಲ

