ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸನ್ 2026-27 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ, ಪಾಲಕರ ಸಭೆ ನಡೆಯಿತು. ಅತ್ಯಂತ ಖುಷಿಯಿಂದ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲೆಯ ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿದರು. ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಹೊಸ ಶೈಕ್ಷಣಿಕ ವರ್ಷವನ್ನು ಬರಮಾಡಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು. ವಿದ್ಯಾರ್ಥಿಗಳ ಕುಂಭಮೇಳ, ವಿಶೇಷ ಅಕ್ಷರ ಬಂಡಿ, ಗ್ರಂಥ ಮೆರವಣಿಗೆಯೊಂದಿಗೆ ಗ್ರಾಮದಲ್ಲಿ ನಡೆದ ಪ್ರಭಾತಪೇರಿ ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ ಉತ್ತಮ ಶಿಕ್ಷಣದಿಂದ ಉತ್ತಮ ಬದುಕು ಕಟ್ಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಶಿಸ್ತು, ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಶ್ರೇಷ್ಠ ಸಾಧನೆ ಮಾಡಬಹುದು. ಯಶಸ್ಸು ಗಳಿಸಲು ಇಚ್ಛಾಶಕ್ತಿ ಬಹಳ ಮುಖ್ಯವಾಗುತ್ತದೆ ಎಂದರು. ವಿದ್ಯಾರ್ಥಿಗಳು ಪ್ರತಿ ದಿನ ಶಾಲೆಗೆ ಹಾಜರಾಗಿ ಹೊಸದನ್ನು ಕಲಿಯುವ ಕುತೂಹಲ ಬೆಳೆಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.


ಶಿಕ್ಷಕರಾದ ಎಸ್.ವಿ.ಬಳಿಗಾರ ಮಾತನಾಡಿ ವಿದ್ಯಾರ್ಥಿಗಳು ಶಾಲೆಯ ನಿಯಮಗಳನ್ನು ಪಾಲಿಸಬೇಕು. ಸಮಯ ವ್ಯರ್ಥ ಮಾಡದೇ ವೇಳಾಪಟ್ಟಿಯನ್ನು ತಯಾರಿಸಿಕೊಂಡು ಅಧ್ಯಯನ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ವಿನಾಯಕ ಬಡಿಗೇರ, ಉಪಾದ್ಯಕ್ಷರಾದ ರಮೇಶ ಸೂರ್ಯವಂಶಿ, ಸದಸ್ಯರಾದ ದುಂಡಪ್ಪ ಮಡಿವಾಳರ, ಶಿಕ್ಷಕರಾದ ಜಗದೀಶ ನರಿ, ಪ್ರವೀಣ ಗುರುನಗೌಡರ, ಹೇಮಲತಾ ಪುರಾಣಿಕ ಹಾಗೂ ಗ್ರಾಮದ ಹಿರಿಯರು, ಪಾಲಕರು ಉಪಸ್ಥಿತರಿದ್ದರು. 9 ನೇ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಚನಬಸಮ್ಮ ಸೊಗಲದ ಸ್ವಾಗತಿಸಿದರು. ಪಲ್ಲವಿ ಸೂರ್ಯವಂಶಿ ವಂದಿಸಿದರು. ವಿದ್ಯಾ ಗರಗದ ನಿರೂಪಿಸಿದರು.

