ಗುರುಮಠಕಲ್: ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ್ ಅವರು ತಾಲೂಕಿನ ಕೃಷಿ ಮಾರುಕಟ್ಟೆಯಲ್ಲಿ ಎತ್ತಿನ ಸಂತೆಯ ಜೊತೆಗೆ ಕುರಿ ಸಂತೆಯನ್ನೂ ಆರಂಭಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುಮಠಕಲ್ ಹಾಗೂ ಸುತ್ತಮುತ್ತಲಿನ ರೈತರು ಮತ್ತು ಕುರಿ ಸಾಕಾಣಿಕೆದಾರರು ಕುರಿಗಳನ್ನು ಖರೀದಿಸಲು ಸುಮಾರು 50 ಕಿಲೋಮೀಟರ್ಗಳಷ್ಟು ದೂರ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಗುರುಮಠಕಲ್ನಲ್ಲಿ ಪ್ರತಿ ಸೋಮವಾರ ನಡೆಯುವ ಎತ್ತಿನ ಸಂತೆಯ ಜೊತೆಗೆ ಕುರಿ ಸಂತೆಯನ್ನೂ ಆರಂಭಿಸಿದರೆ ರೈತರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು. ಅಲ್ಲದೆ, ದನ-ಕರುಗಳ ಸಂತೆಗೆ ಅಗತ್ಯವಾದ ಕುಡಿಯುವ ನೀರು, ನೆರಳು, ವಿಶ್ರಾಂತಿ ಸ್ಥಳ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು.
"ದೇಶವನ್ನು ಸೈನಿಕರು ಕಾಪಾಡಿದರೆ, ದೇಶದ ಜನತೆಗೆ ಅನ್ನ ನೀಡುವವರು ರೈತರು. ರೈತರು ದೇಶದ ಬೆನ್ನೆಲುಬಾಗಿದ್ದು, ಅವರಿಗೆ ಸರ್ಕಾರ ಮತ್ತು ಅಧಿಕಾರಿಗಳು ಮೊದಲ ಆದ್ಯತೆ ನೀಡಬೇಕು" ಎಂದು ಉಮೇಶ್ ಕೆ. ಮುದ್ನಾಳ್ ಹೇಳಿದರು.
ವರದಿ : ರವಿ ಬುರನೋಳ್


