Ad imageAd image

ಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿ

Bharath Vaibhav
ಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿ
WhatsApp Group Join Now
Telegram Group Join Now

ಧಾರವಾಡ : ಪ್ರಾದೇಶಿಕ ಹೃದಯ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ಸ್ಥಾಪಿಸಿರುವ ಇಲ್ಲಿನ ಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನ ಕಾರ್ಡಿಯಾಲಜಿ (ಹೃದ್ರೋಗ) ವಿಭಾಗದ ವೈದ್ಯರ ತಂಡ, ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್-ಚೇಂಬರ್ ಪೇಸ್ ಮೇಕರ್ ಅನ್ನು ಯಶಸ್ವಿಯಾಗಿ ಅಳವಡಿಸಿದೆ. ಇದು ಸಂಕೀರ್ಣವಾದ ಹೃದಯ ಬಡಿತದ ಸಮಸ್ಯೆಗಳ ಚಿಕಿತ್ಸೆಯಲ್ಲಿ ಒಂದು ದೊಡ್ಡ ಮುನ್ನಡೆಯಾಗಿದೆ.

ಖ್ಯಾತ ಹೃದ್ರೋಗ ತಜ್ಞ ಡಾ. ರಘು ಪ್ರಸಾದ್ ಎಸ್. ನೇತೃತ್ವದಲ್ಲಿ ನಡೆದ ಈ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯು, ಈ ಹಿಂದೆ ಇಂತಹ ಸುಧಾರಿತ ಚಿಕಿತ್ಸೆಗಳಿಗಾಗಿ ಮಹಾನಗರಗಳಿಗೆ ಅಲೆದಾಡಬೇಕಿದ್ದ ರೋಗಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.

ಪಕ್ಕದ ಜಿಲ್ಲೆಯ 68 ವರ್ಷದ ವೃದ್ಧರೊಬ್ಬರು ಈ ಚಿಕಿತ್ಸೆಯ ಫಲಾನುಭವಿಯಾಗಿದ್ದಾರೆ. ಅವರು ‘ಬ್ರಾಡಿಕಾರ್ಡಿಯಾ’ (ಹೃದಯ ಬಡಿತ ಅಸಹಜವಾಗಿ ಕಡಿಮೆಯಾಗುವ ಸ್ಥಿತಿ) ಎಂಬ ಗಂಭೀರ ಸಮಸ್ಯೆಯಿಂದಾಗಿ ಪದೇ ಪದೇ ಪ್ರಜ್ಞೆ ತಪ್ಪುತ್ತಿದ್ದರು. ಆಸ್ಪತ್ರೆಗೆ ದಾಖಲಾದಾಗ ಅವರ ಹೃದಯ ಬಡಿತ ನಿಮಿಷಕ್ಕೆ ಕೇವಲ 30ಕ್ಕೆ ಕುಸಿದು, ಸ್ಥಿತಿ ಚಿಂತಾಜನಕವಾಗಿತ್ತು.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯರ ತಂಡ, ಸಾಂಪ್ರದಾಯಿಕ ಪೇಸ್ ಮೇಕರಗಳಿಂದ ಎದುರಾಗಬಹುದಾದ ಅನೇಕ ಅಪಾಯಗಳನ್ನು ನಿವಾರಿಸುವ, ಇತ್ತೀಚೆಗಷ್ಟೇ ವೈದ್ಯಕೀಯ ಕ್ಷೇತ್ರಕ್ಕೆ ಪರಿಚಯಿಸಲಾದ ಅತ್ಯಾಧುನಿಕ ವೈರ್-ಮುಕ್ತ (ತಂತಿ ರಹಿತ) ‘ಲೀಡ್ ಲೆಸ್ ಡ್ಯುಯಲ್-ಚೇಂಬರ್ ಪೇಸ್ ಮೇಕರ್ ‘ ಅಳವಡಿಸಲು ನಿರ್ಧರಿಸಿತು.

ಕನಿಷ್ಠ ಗಾಯದ, ವೈರ್-ಮುಕ್ತ ಅತ್ಯಾಧುನಿಕ ಚಿಕಿತ್ಸೆ

ಎದೆ ಸೀಳಿ, ತಂತಿಗಳನ್ನು ಅಳವಡಿಸಬೇಕಾದ ಸಾಂಪ್ರದಾಯಿಕ ಪೇಸ್ ಮೇಕರ್ ಗಳಿಗಿಂತ ಭಿನ್ನವಾಗಿ, ಈ ಸುಧಾರಿತ ಸಾಧನವು ಸಂಪೂರ್ಣವಾಗಿ ವೈರ್ಲೆಸ್ ಆಗಿದೆ. ಸ್ಥಳೀಯ ಅರಿವಳಿಕೆ (ಲೋಕಲ್ ಅನಸ್ತೇಶಿಯಾ) ನೀಡಿ ಸುಮಾರು ಒಂದು ಗಂಟೆಗಳ ಕಾಲ ನಡೆಸಲಾದ ಈ ಪ್ರಕ್ರಿಯೆಯಲ್ಲಿ, ತೊಡೆಯ ಭಾಗದ ರಕ್ತನಾಳದ ಮೂಲಕ ಕ್ಯಾತಿಟರ್ ಸಹಾಯದಿಂದ ಸಣ್ಣ ಪೇಸ್ಮೇಕರ್ ಕ್ಯಾಪ್ಸುಲ್ಗಳನ್ನು ನೇರವಾಗಿ ಹೃದಯದ ಮೇಲಿನ ಮತ್ತು ಕೆಳಗಿನ ಬಲ ಕೋಣೆಗಳಲ್ಲಿ (ಚೇಂಬರ್ಗಳಲ್ಲಿ) ಅಳವಡಿಸಲಾಯಿತು.

“ಹೃದಯ ಬಡಿತದ ಸಮಸ್ಯೆಗಳ ಚಿಕಿತ್ಸೆಯಲ್ಲಿ ಇದೊಂದು ಮಹತ್ವದ ಸಾಧನೆಯಾಗಿದೆ. ಇಲ್ಲಿ ಯಾವುದೇ ತಂತಿಗಳಾಗಲಿ ಅಥವಾ ಶಸ್ತ್ರಚಿಕಿತ್ಸೆಯ ಪಾಕೆಟ್ ಗಳಾಗಲಿ ಇಲ್ಲದಿರುವುದರಿಂದ, ರೋಗಿಯ ದೇಹದ ಮೇಲೆ ಯಾವುದೇ ಕಲೆಗಳು ಉಳಿಯುವುದಿಲ್ಲ. ರಕ್ತಸ್ರಾವ ಕನಿಷ್ಠವಾಗಿರುತ್ತದೆ ಮತ್ತು ಸೋಂಕುಗಳು ಅಥವಾ ತಂತಿ-ಸಂಬಂಧಿತ ತೊಡಕುಗಳ ಅಪಾಯ ಶೂನ್ಯವಾಗಿರುತ್ತದೆ. ಅಲ್ಲದೆ, ಈ ಸಾಧನವು ಸುಮಾರು 17 ವರ್ಷಗಳ ಬ್ಯಾಟರಿ ಅವಧಿಯನ್ನು ಹೊಂದಿದ್ದು, ಸಂಪೂರ್ಣವಾಗಿ ಎಂಆರ್ ಐ (MRI) ಸ್ಕ್ಯಾನಿಂಗ್ ಗೂ ಸುರಕ್ಷಿತವಾಗಿದೆ” ಎಂದು ಡಾ. ರಘು ಪ್ರಸಾದ್ ವಿವರಿಸಿದರು.

ಈ ಚಿಕಿತ್ಸೆಯ ಫಲಿತಾಂಶ ತಕ್ಷಣವೇ ಗೋಚರಿಸಿತು ಮತ್ತು ಅಚ್ಚರಿ ಮೂಡಿಸುವಂತಿತ್ತು. ಚಿಕಿತ್ಸೆಯಾದ ಸ್ವಲ್ಪ ಹೊತ್ತಿನಲ್ಲೇ ರೋಗಿಯ ಹೃದಯ ಬಡಿತ ನಿಮಿಷಕ್ಕೆ 70ಕ್ಕೆ ಸ್ಥಿರಗೊಂಡಿತು. ಅವರು ಮರುದಿನವೇ ಎದ್ದು ನಡೆಯಲು ಪ್ರಾರಂಭಿಸಿದರು ಹಾಗೂ ಕೇವಲ 24 ಗಂಟೆಗಳ ಒಳಗೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.

ನಂತರದ ತಪಾಸಣೆಗಳಲ್ಲೂ ರೋಗಿಯು ಆರೋಗ್ಯವಾಗಿದ್ದಾರೆ ಮತ್ತು ಪೇಸ್ ಮೇಕರ್ ಎಲ್ಲಾ ಪ್ಯಾರಾಮೀಟರ್ ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಈ ಸಾಧನೆಯ ಕುರಿತು ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಶ್ರೀ ಶಶಿಕುಮಾರ್ ಪಟ್ಟಣಶೆಟ್ಟಿ, “ಹೃದ್ರೋಗ ತಂತ್ರಜ್ಞಾನದಲ್ಲಿ ಆಗುತ್ತಿರುವ ಕ್ಷೀಪ್ರ ಬೆಳವಣಿಗೆ ಹಾಗೂ ಪ್ರಾದೇಶಿಕ ಮಟ್ಟದಲ್ಲಿಯೂ ಅದು ಸುಲಭವಾಗಿ ಲಭ್ಯವಾಗುತ್ತಿರುವುದಕ್ಕೆ ಈ ಮೈಲಿಗಲ್ಲು ಸಾಕ್ಷಿಯಾಗಿದೆ. ಉತ್ತರ ಕರ್ನಾಟಕದ ರೋಗಿಗಳು ಇನ್ನು ಮುಂದೆ ಇಂತಹ ಸುಧಾರಿತ, ಜೀವ ಉಳಿಸುವ ಹೃದಯ ಸಂಬಂಧಿ ಚಿಕಿತ್ಸೆಗಳಿಗಾಗಿ ದೊಡ್ಡ ನಗರಗಳಿಗೆ ಅಲೆದಾಡುವ ಅಗತ್ಯವಿಲ್ಲ ಎಂಬುದನ್ನು ಇದು ಸಾಬೀತುಪಡಿಸಿದೆ” ಎಂದು ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸೋಮನಾಥ ರಾಯಕೋಡಿ, ದುಂಡೇಶ್ ತಡಕೋಡ ಇನ್ನಿತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!