ಬೆಳಗಾವಿ : ಮಹಿಳೆಯರ ಆಕ್ರೋಶ ಮತ್ತು ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆ, ಕರ್ನಾಟಕ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಬಿಡುಗಡೆ ಮಾಡಲು ಮುಂದಾಗಿದೆ. ಮೂರು ತಿಂಗಳ ಕಾಲ ಯೋಜನೆಯ ಹಣ ಬಾಕಿಯಾಗಿದ್ದು, ಇದೀಗ ಇಂದು ಜಮೆಯಾಗಲಿದೆ.ಕಳೆದ 3 ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದ್ ಆಗಿದೆ.
2,000 ರೂಪಾಯಿ ಹಣ ಬಾರದೆ ಇರೋ ಕಾರಣ ನಾರಿಯರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. 3 ತಿಂಗಳಿಂದ ಬ್ಯಾಂಕ್ಗೆ ಅಲೆದರೂ ಹಣ ಮಾತ್ರ ಜಮೆಯಾಗಿಲ್ಲ. ಹಣಬಾರದಕ್ಕೆ ಹಲವು ಜಿಲ್ಲೆಯ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ.
ಮನೆ ಬಾಡಿಗೆ, ಆಸ್ಪತ್ರೆ, ಇತರೆ ಖರ್ಚಿಗಾಗಿ ಬಳಕೆಯಾಗ್ತಿದ್ದ ಹಣ ಈಗ ಬಾರದಿದ್ದಕ್ಕೆ ಮಹಿಳೆಯರು ಕಂಗಾಲಾಗಿದ್ದಾರೆ. ಹೀಗಾಗಿ ರಾಜ್ಯದ ಮಹಿಳೆಯರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇವೆಲ್ಲದರ ನಡುವೆ ಎಚ್ಚೆತ್ತ ಸರ್ಕಾರ ನವೆಂಬರ್ ತಿಂಗಳ ಹಣ ಶುಕ್ರವಾರ, ಅಂದರೆ ಇಂದೇ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ. ಡಿಸೆಂಬರ್ ತಿಂಗಳ ಹಣವನ್ನು ಮುಂದಿನ ಸೋಮವಾರ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಹಣ ಬಿಡುಗಡೆ ಪ್ರಕ್ರಿಯೆಯಲ್ಲಿ ತಾಂತ್ರಿಕ ಬದಲಾವಣೆ ಆದ್ದರಿಂದ ಈ ವಿಳಂಬ ಸಂಭವಿಸಿದೆ ಮುಂದೆ ಈ ರೀತಿ ಆಗುವುದಿಲ್ಲ ಎಂದು ಹೇಳಿದ್ದರು.
ಜೊತೆಗೆ ಗ್ರಾಮ ಹಾಗೂ ತಾಲೂಕು ಪಂಚಾಯತ್ಗಳ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದಿದ್ದರು.ಇದೀಗ ಮೂರು ತಿಂಗಳ ಹಣ ಬಿಡುಗಡೆಗೆ ಸರ್ಕಾರ ಮುಂದಾಗಿದ್ದು, ಎಷ್ಟು ತಿಂಗಳ ಹಣ ಬ್ಯಾಂಕ್ ಗೆ ಜಮೆ ಆಗುತ್ತದೆ ಎಂದು ಕಾದು ನೋಡಬೇಕಿದೆ.