ಸೇಡಂ : ದಿ.೧೯/೦೨/೨೦೨೫ ರಂದು ರಾತ್ರಿ ೧೧ ಗಂಟೆಗೆ ಪಟ್ಟಣದ ನಿವಾಸಿ ಮುಕ್ತಾರ ಎಂಬಾತ ಹೃದಯಾಘಾತದಿಂದ ಸೇಡಂ ಸರಕಾರಿ ಅಸ್ಪತ್ರೆಗೆ ತೆರಳಿದ್ದಾನೆ. ಹೆಚ್ಚಿನ ಮತ್ತು ತುರ್ತು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲು ವೈದ್ಯರು ಸೂಚಿಸಿದ್ದು, ಅದರಂತೆ ಅಂಬುಲೆನ್ಸ್ ನಲ್ಲಿ ತೆರಳುವಾಗ ಮುಕ್ತಾರ ಎಂಬಾತ ಸಾವನ್ನಪ್ಪಿದ್ದಾನೆ.
ಕಲಬುರಗಿಗೆ ತೆರಳುವಾಗ ಸೇಡಂ ಪಟ್ಟಣದ ಹೃದಯಭಾಗದಲ್ಲಿರುವ ವಾಸವದತ್ತಾ ಸಿಮೆಂಟ್ ಕಾರ್ಖಾನೆಗೆ ಸಂಪರ್ಕ ಕಲ್ಪಿಸುವ ರೈಲು ಹಳಿಯಲ್ಲಿ ಗೂಡ್ಸ್ ರೈಲು ಸಂಚರಿಸಿದೆ. ಇದರಿಂದ ವಿಳಂಬವಾದ ಕಾರಣ ಮುಕ್ತಾರ ಆರೋಗ್ಯದಲ್ಲಿ ಮತ್ತಷ್ಟು ಸಮಸ್ಯೆ ಎದುರಾಗಿದ್ದು, ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸಾಗಿಸಿದ್ದಲ್ಲಿ ವ್ಯಕ್ತಿ ಬದುಕುತ್ತಿದ್ದ ಎನ್ನಲಾಗಿದ್ದು, ಸೇಡಂನ ವಾಸವದತ್ತಾ ಸಿಮೆಂಟ್ ಕಾರ್ಖಾನೆಯ ಎದುರು ಜನ ಜಮಾಯಿಸಿದ್ದಾರೆ. ಪ್ರಕ್ಷುಬ್ದ ವಾತಾವರಣ ನಿರ್ಮಾಣಬಮವಾಗಿದೆ.
ಕಾರ್ಖಾನೆ ಹಾಗೂ ರೈಲ್ವೆ ಇಲಾಖೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅನೇಕ ತಿಂಗಳುಗಳಿಂದ ವಾಸವದತ್ತಾ ರೈಲು ಹಳಿ ಸ್ಥಳಾಂತರಿಸಬೇಕು ಅಥವಾ ರೈಲು ಸಂಚಾರ ಸಮಯ ಬದಲಾಯಿಸುವಂತೆ ಒತ್ತಾಯಿಸಿ ಸೇಡಂ ಜನಹಿತ ರಕ್ಷಣಾ ಸಮಿತಿ ಹೋರಾಟ ನಡೆಸಿತ್ತು. ಜಿಲ್ಲಾಧಿಕಾರಿ ಫೌಜಿಯ ತರನ್ನುಮ್ ಸಹ ರೈಲು ಸಂಚಾರ ಸಮಯ ಬದಲಿಸುವ ಭರವಸೆ ನೀಡಿದ್ದರು, ಆದರೆ ಇದುವರೆಗೂ ಯಾವುದೇ ಭರವಸೆ ಈಡೇರಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
ಒಂದೆಡೆ ಕಾರ್ಮಿಕನ ಸಾವು, ಇನ್ನೊಂದೆಡೆ ಕಾರ್ಖಾನೆ ಸಿಬ್ಬಂದಿ ಜೊತೆ ಎಎಸ್ಪಿ ಕಾಮಿಡಿ.
ಜನರ ಜೀವನ ಎಂದರೆ ಇಲ್ಲಿನ ರಾಜಕೀಯ ನಾಯಕರಿಗೆ ಮತ್ತು ಅಧಿಕಾರಿಗಳಿಗೆ ಕೇವಲ ಕಾಮಿಡಿಯಾಗಿದೆ ಹೊರತು ಸಮಸ್ಯೆಗೆ ಪರಿಹಾರ ನೀಡುವ ಯೋಚನೆ ಮಾಡುತ್ತಿಲ್ಲ ಎಂದು ಶಿವುಕುಮಾರ ಅಪ್ಪಾಜಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್.