ಚಿಕ್ಕೋಡಿ: ಪತ್ನಿಯು ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಹತ್ಯೆಮಾಡಿದ ಘಟನೆ ರಾಯಬಾಗ ತಾಲೂಕಿನ ಬಾವನಸೌದತ್ತಿ ಗ್ರಾಮದಲ್ಲಿ ನಡೆದಿದ್ದು, ಇದು ಗ್ರಾಮಸ್ಥರನ್ನೇ ಬೆಚ್ಚಿಬೀಳಿಸಿದೆ.
ಬಸ್ತವಾಡ ಗ್ರಾಮದ ಅಪ್ಪಾಸಾಬ ಅಲಿಯಾಸ್ ಮಚ್ಚೇಂದ್ರ ಓಲೇಕಾರ (45) ಕೊಲೆಯಾದ ಗಂಡ. ಆತನ ಹೆಂಡತಿ ಸಿದ್ದವ್ವ ಓಲೇಕಾರ್, ಗಣಪತಿ ಕಾಂಬಳೆಯವರ ಜೊತೆಗೆ ಅನೈತಿಕ ಸಂಬಂಧದಲ್ಲಿದ್ದರು. ಇದಕ್ಕೆ ಗಂಡ ಅಡ್ಡಿ ಮಾಡುತ್ತಿದ್ದರಿಂದ ಇಬ್ಬರೂ ಸೇರಿ ಆತನನ್ನು ಹತ್ಯೆ ಮಾಡಿ, ಕೃಷ್ಣಾ ನದಿಗೆ ಎಸೆದಿದ್ದಾರೆ.
ಸುಗಂಧಾದೇವಿ ದರ್ಶನಕ್ಕೆಂದು ಜನವರಿ 5 ರಂದು ಗಂಡನನ್ನು ಹೆಂಡತಿ ಕರೆದುಕೊಂಡು ಹೋಗಿದ್ದಳು. ಆತ ಕೃಷ್ಣಾ ನದಿ ದಂಡೆ ಮೇಲೆ ಸ್ನಾನ ಮಾಡುತ್ತಿದ್ದಾಗ, ಪತ್ನಿ ಮತ್ತು ಗಣಪತಿ ಇಬ್ಬರೂ ಕಲ್ಲಿನಿಂದ ಹೊಡೆದು ಮಚ್ಚೇಂದ್ರನ ಹತ್ಯೆ ಮಾಡಿದ್ದಾರೆ. ಆತನನ್ನು ಕೊಂದ ಬಳಿಕ ಶವವನ್ನು ಅಲ್ಲೇ ಕೃಷ್ಣಾ ನದಿಗೆ ಎಸೆದು ಪರಾರಿಯಾಗಿದ್ದರು.
ಮರುದಿನ, ನದಿಯಲ್ಲಿ ಶವ ಕಂಡ ಸುದ್ದಿ ಪಡೆದ ರಾಯಬಾಗ ಪೋಲೀಸರು, ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ, ಸತ್ಯ ಹೊರಬಿದ್ದಿದೆ.
ಪ್ರಿಯಕರನ ಜೊತೆಗೆ ಸೇರಿ ಹೆಂಡತಿಯೇ ಕೊಲೆ ಮಾಡಿರುವ ಬಗ್ಗೆ ಹಾಗೂ ಅವರ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕಾಗಿ ಗಂಡನ ಹತ್ಯೆ ಮಾಡಿರುವ ಬಗ್ಗೆ ಇಬ್ಬರೂ ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.