ವಿಜಯನಗರ : ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವ ಹಾಗೂ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಸಿಡಿದೆದ್ದ ಬಿ.ಶ್ರೀರಾಮುಲು ಹೈಕಮಾಂಡ್ ಗೆ ದೂರು ನೀಡುವುದಾಗಿ ಹೇಳಿದ್ದರು.
ಇದೀಗ ಯಡಿಯೂರಪ್ಪ ಅವರೇ ನಮ್ಮ ಹೈಕಮಾಂಡ್.. ಅವರು ಏನೇ ನಿರ್ಧಾರ ಕೈಗೊಂಡರು ನಾನು ಬದ್ಧನಾಗಿರುತ್ತೇನೆ ಎಂದು ಯುಟರ್ನ್ ಹೇಳಿಕೆ ನೀಡಿದ್ದಾರೆ.
ಶ್ರೀ ರಾಮುಲು ಬಂಡಾಯವೆದ್ದ ಬೆನ್ನಲ್ಲೇ ರೆಬಲ್ ನಾಯಕರು ಅವರನ್ನು ಸಂಪರ್ಕಿಸಿ ರಾಮುಲು ಅವರಿಗೆ ಬೆಂಬಲವಾಗಿ ನಿಂತಿದ್ದರು. ಇನ್ಮುಂದೆ ನಾನು ಸುಮ್ಮನಿರುವ ಪ್ರಶ್ನೆಗೆ ಇಲ್ಲ.. ಮುಲಾಜಿಲ್ಲದೇ ಮಾತನಾಡುವೆ ಎಂದಿದ್ದ ಶ್ರೀ ರಾಮುಲುಗೆ ಹೈಕಮಾಂಡ್ ದೆಹಲಿಗೆ ಬರಲು ಸೂಚಿಸಿತ್ತು.
ಆದರೆ ಇಂದು ಹಗರಿಬೊಮ್ಮನಹಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಬಿಜೆಪಿ ರಾಜ್ಯ ಅಧ್ಯಕ್ಷರನ್ನು ಬದಲಿಸುವುದಾದರೆ ನನಗೆ ಅವಕಾಶ ಕೊಡಿ ಎಂದು ವರಿಷ್ಠರ ಬಳಿ ಮನವಿ ಮಾಡಿದ್ದೇನೆ. ಅಂತಿಮವಾಗಿ ಪಕ್ಷದ ತೀರ್ಮಾನ ತೆಗೆದುಕೊಳ್ಳಲಿದೆ. ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದಿದ್ದಾರೆ.